ಮುಂಬೈ (ಐಎಎನ್ಎಸ್/ ಪಿಟಿಐ): ಮಹಾರಾಷ್ಟ್ರದಲ್ಲಿ ಅ.೧೫ರಂದು ನಡೆಯುವ ವಿಧಾನಸಭಾ ಚುನಾವಣೆ ಕ್ಷೇತ್ರ ಹೊಂದಾಣಿಕೆ ವಿಷಯದಲ್ಲಿ ಮಿತ್ರ ಪಕ್ಷಗಳಾದ ಶಿವಸೇನಾ ಮತ್ತು ಬಿಜೆಪಿಗಳೆರಡೂ ಪಟ್ಟು ಸಡಿಲಿಸುವ ಲಕ್ಷಣ ಕಂಡುಬರುತ್ತಿಲ್ಲ. ಇದರಿಂದಾಗಿ ೨೫ ವರ್ಷಗಳ ಈ ಪಕ್ಷಗಳ ಮೈತ್ರಿಯು ಮುರಿದುಬೀಳುವ ಹಂತಕ್ಕೆ ಬಂದು ನಿಂತಿದೆ.
ಎರಡೂ ಪಕ್ಷಗಳು ಮೈತ್ರಿ ಮುಂದುವರಿಸಬೇಕೋ ಅಥವಾ ಕಡಿದುಕೊಳ್ಳಬೇಕೋ ಎಂಬ ಬಗ್ಗೆ ಕೊನೆಯ ಕ್ಷಣದ ಚಿಂತನೆಯಲ್ಲಿವೆ. ಈ ಸಂಬಂಧ ಶುಕ್ರವಾರವಿಡೀ ಹಲವು ಸಭೆಗಳು ನಡೆದವು. ‘ಮೈತ್ರಿ ಮುರಿದುಬೀಳುವುದು ನಿಶ್ಚಿತ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದಷ್ಟೇ ಬಾಕಿ ಉಳಿದಿದೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಬಿಜೆಪಿಯ ಹಿರಿಯ ನಾಯಕರೊಬ್ಬರು.
ಶಿವಸೇನಾ ಪದಾಧಿಕಾರಿಯೊಬ್ಬರು ಕೂಡ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ‘ಮೈತ್ರಿ ಇನ್ನು ಮುಗಿದ ಮಾತು’ ಎಂದ ಅವರು ಪಕ್ಷದ ನಿಲುವು ಘೋಷಿಸುವ ಮುನ್ನ ಯಾವ ಬೆಳವಣಿಗೆ ನಡೆಯುತ್ತಿವೆ ಎಂಬುದನ್ನು ಕಾದುನೋಡಲಾಗುತ್ತಿದೆ ಎಂದರು.
ಈ ಮಧ್ಯೆ ಬಿಕ್ಕಟ್ಟಿನ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದು ಮೈತ್ರಿ ಬಯಸುವವರಲ್ಲಿ ಒಂದಷ್ಟು ಸಮಾಧಾನ ಮೂಡಿಸಿದೆ. ಕ್ಷೇತ್ರ ಹೊಂದಾಣಿಕೆ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವಲ್ಲಿನ ಭಿನ್ನಾಭಿಪ್ರಾಯಗಳೇ ವಿವಾದ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ.
ರಾಜ್ಯದ ಒಟ್ಟು ೨೮೮ ಕ್ಷೇತ್ರಗಳ ಪೈಕಿ ತನಗೆ ೧೩೫ ಸ್ಥಾನಗಳನ್ನು ತನಗೆ ಬಿಟ್ಟು ಶಿವಸೇನೆ ಕೂಡ ಅಷ್ಟೇ (೧೩೫) ಸ್ಥಾನಗಳಲ್ಲಿ ಸ್ಪರ್ಧಿಸಬೇಕು; ಉಳಿದ ೧೮ ಕ್ಷೇತ್ರಗಳನ್ನು ಮೈತ್ರಿಕೂಟದ ಸಣ್ಣಪುಟ್ಟ ಪಕ್ಷಗಳಿಗೆ ಬಿಡಬೇಕು ಎಂದು ಬಿಜೆಪಿ ಪಟ್ಟುಹಿಡಿದಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯದಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ, ಮಿತ್ರಪಕ್ಷಗಳ ಬಗ್ಗೆ ಪ್ರಸ್ತಾಪ ಮಾಡದೆ ‘ಬಿಜೆಪಿಯು ಮುಂದಿನ ಸರ್ಕಾರ ರಚಿಸಲಿದೆ’ ಎಂದಿದ್ದಾರೆ. ಹೊಂದಾಣಿಕೆ ಬಗ್ಗೆ ಸಹಮತಕ್ಕೆ ಬರಲು ಪಕ್ಷವು ಶಿವಸೇನೆಗೆ ೨೪ ಗಂಟೆಗಳ ಗಡುವು ನೀಡಿದೆ. ಆದರೆ ಶಿವಸೇನಾ ಇದನ್ನು ತಿರಸ್ಕರಿಸಿದೆ.
‘ಪ್ರತ್ಯೇಕ ಸ್ಪರ್ಧೆಯೇ ಸೂಕ್ತ’
ಮುಂಬೈ: ಮಹಾರಾಷ್ಟ್ರದಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸಬೇಕು ಎಂದು ಎನ್ಸಿಪಿ ಹಿರಿಯ ಮುಖಂಡ ಹಾಗೂ ಸಚಿವ ಛಗನ್ ಭುಜಬಲ್ ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಆಡಳಿತಾರೂಢ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ, ಮತ್ತೊಂದೆಡೆ ಎದುರಾಳಿ ಮಿತ್ರ ಪಕ್ಷಗಳಾದ ಶಿವಸೇನಾ ಮತ್ತು ಬಿಜೆಪಿ ಇವೆರಡೂ ಕೂಟಗಳಲ್ಲೂ ಈವರೆಗೂ ಕ್ಷೇತ್ರ ಹೊಂದಾಣಿಕೆ ಬಿಕ್ಕಟ್ಟು ಬಗೆಹರಿದಿಲ್ಲ. ಹೀಗಾಗಿ ಭುಜಬಲ್ ಅವರು, ಎಲ್ಲಾ ಪ್ರಮುಖ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ತಮ್ಮ ನೈಜ ಬಲವನ್ನು ಪರೀಕ್ಷೆಗೆ ಒಡ್ಡಬೇಕು ಎಂದಿದ್ದಾರೆ.
ಈ ಅಭಿಪ್ರಾಯವನ್ನು ಕಾಂಗ್ರೆಸ್ ಗೌಣವಾಗಿ ತೆಗೆದುಕೊಂಡಿದೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮೈತ್ರಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಹೇಳಿದೆ.
ಬಿಜೆಪಿಯಿಂದ ಹೊಸ ಪ್ರಸ್ತಾಪ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಬಯಸುವ ಕ್ಷೇತ್ರಗಳ ಹೊಸ ಪಟ್ಟಿಯನ್ನು ಶಿವಸೇನೆಗೆ ನೀಡಲಿದೆ. ಶಿವಸೇನಾ ಕಳೆದ ಹಲವು ಚುನಾವಣೆಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲವೋ ಅಲ್ಲಿ ಸ್ಪರ್ಧಿಸಬೇಕೆಂಬುದು ಆ ಪಕ್ಷದ ಇರಾದೆಯಾಗಿದೆ.
‘ನಾವು ಸ್ಪರ್ಧಿಸಬಯಸುವ ಕ್ಷೇತ್ರಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಿ ಶಿವಸೇನಾಗೆ ನೀಡುತ್ತೇವೆ. ಕಳೆದ ೨೫ ವರ್ಷಗಳಲ್ಲಿ ಶಿವಸೇನಾ ಒಮ್ಮೆಯೂ ಗೆಲ್ಲದ ೫೯ ಕ್ಷೇತ್ರಗಳು ಹಾಗೂ ಬಿಜೆಪಿ ಗೆಲ್ಲದ ೧೯ ಕ್ಷೇತ್ರಗಳು ಇವೆ. ಶಿವಸೇನೆಯು ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕು’ ಎಂದು ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಧೀರ್ ಮುಂಗಂಟಿವರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.