ಬೆಂಗಳೂರು: ಪಶುವೈದ್ಯರ ಸೇವಾ ಸೌಲಭ್ಯ, ಬಡ್ತಿ ಹಾಗೂ ಪಶು ಆಸ್ಪತ್ರೆಗಳ ಸುಧಾರಣೆಗೆ ಮೀರಾ ಸಕ್ಸೇನಾ ಸಮಿತಿ ಮಾಡಿರುವ ಶಿಫಾರಸುಗಳ ಜಾರಿಗೆ ಗುರುವಾರ ಗುಲ್ಬರ್ಗದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯದಿದ್ದರೆ 19 ರಿಂದ ರಾಜ್ಯದ ಎಲ್ಲಾ ಪಶುಚಿಕಿತ್ಸಾಲಯಗಳ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಟಿ.ಆರ್.ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಜಾನುವಾರಗಳಿಗೆ ಮೇವು, ನೀರಿನ ಪೂರೈಕೆ ಮತ್ತು ಚಿಕಿತ್ಸೆ ಹೊರತುಪಡಿಸಿ ಇತರ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು. ಆಯಾ ಜಿಲ್ಲೆಯ ಉಪನಿರ್ದೇಶಕರ ಕಚೇರಿ ಮುಂದೆ ಪಶುವೈದ್ಯರು ಧರಣಿ ನಡೆಸುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.