ನವದೆಹಲಿ (ಪಿಟಿಐ): ಡಿಎಂಕೆ ಮುಖಂಡ ಎಂ.ಕರುಣಾನಿಧಿ ಅವರು ಶನಿವಾರ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ತಮಿಳುನಾಡಿನಲ್ಲಿ ಏಪ್ರೀಲ್ 13ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಡಿಎಂಕೆ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿದ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ.
ಜನಪಥ್ 10 ರಸ್ತೆಯಲ್ಲಿರುವ ಸೋನಿಯಾ ನಿವಾಸಕ್ಕೆ ಬೆಳಿಗ್ಗೆ ಕರುಣಾನಿಧಿ ಅವರು ಪತ್ನಿ ರಜತಿ ಅಮ್ಮಾಳ್ ಸಮೇತ ಆಗಮಿಸಿ ಸುಮಾರು 30 ನಿಮೀಷಗಳ ಕಾಲ ಮಾತುಕತೆ ನಡೆಸಿದರು. ಇವರೊಂದಿಗೆ ಡಿಎಂಕೆ ಹಿರಿಯ ಮುಖಂಡ ಟಿ.ಆರ್.ಬಾಲು ಸಹ ಉಪಸ್ಥಿತರಿದ್ದರು.
ಭೇಟಿ ವೇಳೆ ಕರುಣಾನಿಧಿ ಅವರು 2ಜಿ ತರಂಗಾಂತರ ಹಗರಣದಲ್ಲಿ ಜೈಲು ಸೇರಿರುವ ತಮ್ಮ ಪುತ್ರಿ ಕನ್ನಿಮೋಳಿ ವಿಷಯ ಕುರಿತು ಸೋನಿಯಾ ಅವರೊಂದಿಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಶನಿವಾರ ತನ್ನ ಅಭಿಪ್ರಾಯ ತಿಳಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದಾಗಿದೆ. ಕನ್ನಿಮೋಳಿ ಸೇರಿದಂತೆ 2ಜಿ ಹಗರಣದ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯು ಅಕ್ಟೋಬರ್24ರಿಂದ ನಡೆಯಲಿದೆ.
ಭೇಟಿ ನಂತರ ಕರುಣಾನಿಧಿ ಅವರು ತಮ್ಮ ಭೇಟಿಗಾಗಿ ಹೊರಗಡೆ ಕಾಯುತ್ತಿದ್ದ ಮಾಧ್ಯಮದವರ ಕಣ್ತಪ್ಪಿಸಿ ಮತ್ತೊಂದು ದ್ವಾರದ ಮೂಲಕ ಅಲ್ಲಿಂದ ನಿರ್ಗಮಿಸಿದರು.
ಕರುಣಾನಿಧಿ ಅವರು ಶನಿವಾರ ತಿಹಾರ್ ಜೈಲಿನಲ್ಲಿರುವ ಪುತ್ರಿ ಕನ್ನಿಮೋಳಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.