ಕಂಪ್ಲಿ: ಸೋಮಪ್ಪ ಕೆರೆ ಅಂಗಳದಲ್ಲಿ ವಾಸಿಸಿರುವ ನಿವಾಸಿಗಳ ಕಟ್ಟಡಗಳನ್ನು ಯಾವುದೇ ಕಾರಣಕ್ಕೆ ತೆರವುಗೊಳಿಸ ಬಾರದೆಂದು ಈ ಕುರಿತು ಪುನರ್ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ, ವಿರಾಜಪೇಟೆ ಮಾಜಿ ಶಾಸಕ ಎಚ್.ಡಿ. ಬಸವರಾಜ್ ತಿಳಿಸಿದರು.
ಸ್ಥಳೀಯ ಸೋಮೇಶ್ವರ ದೇವಸ್ಥಾನ ದಲ್ಲಿ ಜರುಗಿದ ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಮಾತನಾಡಿ, ನಿವಾಸಿಗಳ ತೆರವಿಗೆ ಒಂದು ತಿಂಗಳು ಗಡುವು ನೀಡಿರುವುದನ್ನು ವಿರೋಧಿಸಿದರು.
ಸುಮಾರು ಆರು ದಶಕಗಳಿಂದ ಸೋಮಪ್ಪನಕೆರೆ ಅಂಗಳದಲ್ಲಿ ನೆಲೆಸಿ ರುವ ನಿವಾಸಿಗಳ ಕಟ್ಟಡಗಳನ್ನು ತೆರವು ಗೊಳಿಸದಂತೆ ಈಗಾಗಲೇ ನವ ದೆಹಲಿಯ ರಾಷ್ಟ್ರೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ ಮತ್ತು ಮಾನವ ಹಕ್ಕುಗಳ ಆಯೋಗ ಗಳ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು
ಬೆಂಗಳೂರಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗಗಳ ಅಧ್ಯಕ್ಷರನ್ನು ಭೇಟಿಯಾಗಿ ಸೋಮಪ್ಪ ಕೆರೆ ನಿವಾಸಿಗಳ ಕಟ್ಟಡಗಳನ್ನು ತೆರವು ಗೊಳಿಸುವ ಕಾರ್ಯವನ್ನು ಕೈಬಿಡುವಂತೆ ಮನವಿ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಲೋಕಾಯುಕ್ತರನ್ನು ಭೇಟಿ ಮಾಡಿ ದಾಖಲೆ ಸಹಿತ ವಿವರಿಸಲಾಗುವುದು ಎಂದರು.
ಮುಖ್ಯಮಂತ್ರಿ, ಸಂಬಂಧಪಟ್ಟ ಮಂತ್ರಿಗಳನ್ನು, ವಿವಿಧ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ವಿವರಿಸಿ ಜಿಲ್ಲಾಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಕೈ ಬಿಡುವಂತೆ ಸೂಚಿಸಲು ಪ್ರಯತ್ನಿಸ ಲಾಗುವುದು ಎಂದು ವಿವರಿಸಿದರು.
ಕೆರೆ ಅಂಗಳ 48 ಎಕರೆ ವಿಸ್ತೀರ್ಣ ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ 320 ಕುಟುಂಬ ಗಳು ಕೇವಲ 6 ಎಕರೆ ಪ್ರದೇಶ ದಲ್ಲಿ ವಾಸಿಸುತ್ತಿದ್ದಾರೆ. ಆರು ಎಕರೆ ಬಿಟ್ಟು, ಉಳಿದ 42 ಎಕರೆ ಪ್ರದೇಶವನ್ನು ಕೆರೆ ಅಭಿವೃದ್ಧಿಗೆ ಬಳಸಿ ಕೊಳ್ಳಲು ನಮ್ಮದೇನು ಅಭ್ಯಂತರವಿಲ್ಲ ಎಂದರು.
ಸೋಮಪ್ಪನ ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಜಿ. ಆನಂದಮೂರ್ತಿ, ಉಪಾಧ್ಯಕ್ಷರಾದ ಎನ್. ವೆಂಕಟೇಶ್, ವಿ. ಫಕ್ರುದ್ದೀನ್, ಕಾರ್ಯದರ್ಶಿ ಎಂ. ಗಾಳಿಕುಮಾರ್, ಖಜಾಂಚಿ ಎಸ್. ಜಂಬಣ್ಣ, ಸಹ ಕಾರ್ಯದರ್ಶಿ ಎಂ. ಯಶೋದಮ್ಮ, ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ. ಅಮೀನ್ ಅಲಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.