ದೇವದುರ್ಗ: ಪಟ್ಟಣದ ಹೊರವಲಯದಲ್ಲಿ ಕಳೆದ ಎರಡು ವರ್ಷದ ಹಿಂದೆ ಆರಂಭವಾದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ (ಡಿಪ್ಲೊಮ್) ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಕೇಂದ್ರವಾಗದೆ ಹಲವು ಸಮಸ್ಯೆಗಳ ತಾಣವಾಗಿದ್ದು, ವಿದ್ಯಾರ್ಥಿಗಳ ಗೋಳನ್ನು ಕೇಳವರು ಇಲ್ಲದಂತಾಗಿದೆ.
ಕಾಲೇಜು ಆರಂಭದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಸಿವಿಲ್ ಎಂಜನಿಯರ್, ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಸೈನ್ಸ್ ಒಟ್ಟು ನಾಲ್ಕು ವಿಭಾಗಗಳನ್ನು ಆರಂಭಿಸಿಲಾಗಿದೆ. ಅದಕ್ಕೆ ತಕ್ಕಂತೆ ಮೂಲ ಸೌಲಭ್ಯಗಳನ್ನು ನೀಡಬೇಕಾಗಿದ್ದ ಸಂಬಂಧಿಸಿದ ಇಲಾಖೆ ಇತ್ತಕಡೆ ಸುಳಿದಿಲ್ಲ. ಈ ಎಲ್ಲ ಸಮಸ್ಯೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗಾದರೆ ಸಾಕು ತೊಂದರೆ ಪಡುವಂತಾಗಿದೆ.
ಸ್ವಂತ ಕಟ್ಟಡ ಇಲ್ಲ. ಪಟ್ಟಣದಿಂದ ಎರಡು ಕಿಮೀ ದೂರದಲ್ಲಿ ಬರುವ ಪ್ರಥಮ ದರ್ಜೆ ಕಾಲೇಜಿನ ಕೆಲವು ಕೋಣೆಯಲ್ಲಿ ನಡೆಸಲಾಗಿದೆ. ಈ ಮೊದಲೇ ಸದ್ರಿ ಕಟ್ಟಡಕ್ಕೆ ದಶಕದಿಂದ ವಿದ್ಯತ್ ಸಂಪರ್ಕವೇ ಇಲ್ಲದಂಥ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂಬುವಂತೆ ತಾಂತ್ರಿಕ ಕಾಲೇಜು ಆರಂಭಿಸಲಾಗಿದೆ.
ಪ್ರಯೋಗಾಲಯಕ್ಕೆ ಬೆಲೆ ಬಾಳುವ ಉಪಕರಣಗಳು ಮಂಜೂರಾದರೂ ಕೊಠಡಿ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ತುಕ್ಕು ಹಿಡಿದಿವೆ. ಮೇಲಿನ ಕೋರ್ಸ್ಗಳಿಗೆ ತಾಲ್ಲೂಕು ಸೇರಿದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ ಮತ್ತು ಯಾದಗಿರಿ, ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಕಾಲೇಜು ಆರಂಭದಿಂದ ಇಲ್ಲಿವರಿಗೂ ಪ್ರಾಚಾರ್ಯರೇ ಇಲ್ಲ. ಇದ್ದ ಅರೆಕಾಲಿಕ ಉಪನ್ಯಾಸಕರಲ್ಲಿ ಕೆಲವರು ಕಾಲೇಜಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ ಆಗುವುದು ಸಾಮಾನ್ಯವಾಗಿದೆ. ಆಡಳಿತಾತ್ಮಕವಾಗಿ ಪ್ರಥಮ ದರ್ಜೆ ಸಹಾಯಕರು, ಜವಾನರು ಬೇಕಾಗಿದ್ದರೂ ಇಂದಿಗೂ ಇಲ್ಲ.
ಮುಖ್ಯವಾಗಿ ನಾಲ್ಕು ಕೋರ್ಸ್ಗಳಿಗೆ ತಕ್ಕಂತೆ ತರಗತಿಗೆ ಕೋಣೆಗಳ ಮತ್ತು ಪ್ರಯೋಗಾಲಯದ ಅವಶ್ಯಕತೆ ಇದೆ. ಈ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯತೆ ಎಂಬುವಂತೆ ದೂರದ ರಾಯಚೂರಿನ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಯೋಗಾಲಯಕ್ಕೆ ಹೋಗಿ ಬರಬೇಕಾಗಿದೆ ಎಂದು ಕಾಲೇಜಿಗೆ ಭೇಟಿ ನೀಡಿದ `ಪ್ರಜಾವಾಣಿ~ಗೆ ವಿದ್ಯಾರ್ಥಿಗಳು ತಮ್ಮ ಗೋಳನ್ನು ಹೇಳಿಕೊಂಡರು.
ವಸತಿ ಸಮಸ್ಯೆ: ನಾಲ್ಕು ಜಿಲ್ಲೆಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಮೂರು ವರ್ಷದಿಂದ ವಸತಿ ವ್ಯವಸ್ಥೆ ಇಲ್ಲ. ಪಟ್ಟಣದಲ್ಲಿ ಗಗನಕ್ಕೆ ಏರಿದ ಬಾಡಿಗೆ ಮನೆಯಲ್ಲಿಯೇ ವಿದ್ಯಾರ್ಥಿಗಳು ಕಾಲಕಳಿಯಬೇಕಾಗಿದೆ. ಬಡ ವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗದಿದ್ದರೂ ಗೋಳು ಕೇಳವರು ಇಲ್ಲದ ಕಾರಣ ಅನಿವಾರ್ಯ ಸಾಲಮಾಡಿ ಇರಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. 400 ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಕುಡಿಯಲು ನೀರು ಇಲ್ಲ.
ಇದ್ದ ಬೋರ್ವೆಲ್ ಕಳೆದ ವರ್ಷವೇ ಕೆಟ್ಟು ನಿಂತರೂ ಇಂದಿಗೂ ದುರಸ್ತಿ ಇಲ್ಲ. ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲ.
ವೇತನ ಇಲ್ಲ: ವಿದ್ಯಾರ್ಥಿಗಳ ಗೋಳು ಇದಾದರೆ ಇನ್ನೊ ಕಾಲೇಜಿನ ಉಪನ್ಯಾಸಕರ ಗೋಳು ಬೇರೆಯೇ ಇದೆ. ಕಳೆದ ಐದು ತಿಂಗಳಿಂದ ವೇತನ ಇಲ್ಲ. ಇಂಥ ಅವ್ಯವಸ್ಥೆಯನ್ನು ಕಂಡ ಉಪನ್ಯಾಸಕರು ಮತ್ತು ನೂರಾರು ವಿದ್ಯಾರ್ಥಿಗಳು ಬಂದ ದಾರಿಗೆ ವಾಪಸ್ ಹೋದ ಸಾಕಷ್ಟು ಉದಾಹರಣೆ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.