ಉಡುಪಿ: `ಸ್ಕೌಟ್ಸ್- ಗೈಡ್ಸ್ ಚಟುವಟಿಕೆಗಳು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಸಹಕಾರಿಯಾಗಿದೆ. ಕಷ್ಟದಲ್ಲಿರುವವರಿಗೆ ಸಹಕರಿಸುವ ಸೇವಾ ಕಾರ್ಯಗಳು ಸ್ಕೌಟ್ಸ್- ಗೈಡ್ಸ್ ನಿಂದ ನಡೆಯಲಿ' ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಕಮಲಾಬಾಯಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ಕೌಟರ್- ಗೈಡರ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಗತಿನಗರದಲ್ಲಿರುವ ಜಿಲ್ಲಾ ಸ್ಕೌಡ್ಸ್- ಗೈಡ್ಸ್ ಕೇಂದ್ರಕ್ಕೆ ಸರ್ಕಾರದಿಂದ ವಿಶೇಷ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.
`ಎಲ್ಲಾ ಶಾಲೆಗಳಲ್ಲಿ ಸ್ಕೌಟಿಂಗ್- ಗೈಡಿಂಗ್ ಚಟುವಟಿಕೆಗಳು ಸಕ್ರಿಯವಾಗಿ ನಡೆಯಬೇಕು' ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸೀತಾನದಿ ವಿಠಲ್ ಶೆಟ್ಟಿ ಹೇಳಿದರು.
ಜಿಲ್ಲಾ ಮುಖ್ಯ ಆಯುಕ್ತ ಕೆ.ಬಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಜಿಲ್ಲಾ ಆಯುಕ್ತ ಎಡ್ವಿನ್ ಆಳ್ವ, ರೋವರ್ಸ್ ಹೆಡ್ಕ್ವಾಟರ್ಸ್ ಕಮಿಷನರ್ ಪ್ರೊ. ಪಿ. ದಯಾನಂದ್ ಶೆಟ್ಟಿ ಉಪಸ್ಥಿತರಿದ್ದರು.
ಕುಕ್ಕುಜೆ ಯಶೋದಾ ಹೆಗ್ಡೆ ಹಾಗೂ ಮಾಧುರಿ ವಿ. ಭಟ್ ಅವರಿಗೆ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತೆ ಎಂ. ವನಿತಾ ರಾವ್ ಅವರು ಹಿಮಾಲಯನ್ ವುಡ್ ಬ್ಯಾಡ್ಜ್ ಪದಕ ಪ್ರದಾನ ಮಾಡಿದರು. ಸ್ಕೌಟಿಂಗ್-ಗೈಡಿಂಗ್ನಲ್ಲಿ ದೀರ್ಘ ಸೇವೆ ಸಲ್ಲಿಸಿದ ಸ್ಕೌಟರ್-ಗೈಡರ್ಗಳಿಗೆ ದೀರ್ಘ ಸೇವಾ ಪದಕವನ್ನು ನೀಡಲಾಯಿತು.
ರಾಷ್ಟ್ರಪತಿ ಗೈಡ್ಸ್ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಗೈಡ್ಸ್ ಹೆಡ್ಕ್ವಾಟ್ರರ್ಸ್ ಕಮಿಷನರ್ ಸಾವಿತ್ರಿ ಮನೋಹರ್, ಮುಖ್ಯೋಪಾಧ್ಯಾಯ ಬಿ. ಗುಣಕರ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಕಲ್ಮಾಡಿ ಶೇಖರ್ ಪೂಜಾರಿ ಸ್ವಾಗತಿಸಿದರು. ತರಬೇತಿ ಆಯುಕ್ತ ಕೊಗ್ಗ ಗಾಣಿಗ ವಂದಿಸಿದರು. ಸಹಾಯಕ ಜಿಲ್ಲಾ ಕಾರ್ಯದರ್ಶಿ ವಿ. ಜಿ. ಬೈಕಾಡಿ ದೀರ್ಘ ಸೇವಾ ಪದಕ ಪಡೆದವರ ವಿವರ ಓದಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಎಂ. ಪ್ರಭಾಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು.