ಪುಣೆ: ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 79ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಪ್ರಯಾಸದ ಗೆಲುವು ಪಡೆದರೆ, ಇತರ ಪ್ರಮುಖ ಸ್ಪರ್ಧಿಗಳು ಸುಲಭ ಜಯ ದಾಖಲಿಸಿದರು.
ಪಿವೈಸಿ ಹಿಂದು ಜಿಮ್ಖಾನಾ ಹಾಲ್ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಂಕಜ್ 10-75, 10-91, 88-8, 60-25, 61-16 ರಲ್ಲಿ ಚಂಡೀಗಡದ ರಜತ್ ಖನೇಜಾ ಅವರನ್ನು ಮಣಿಸಿದರು. ಮೊದಲ ಎರಡು ಫ್ರೇಮ್ಗಳಲ್ಲಿ ಸೋಲು ಅನುಭವಿಸಿದ ಪಂಕಜ್ ಒತ್ತಡದಲ್ಲಿ ಸಿಲುಕಿದ್ದರು. ಬೆಂಗಳೂರಿನ ಆಟಗಾರ ಆ ಬಳಿಕ ಮರುಹೋರಾಟ ನಡೆಸಲು ಯಶಸ್ವಿಯಾದರು.
ಕಳೆದ ಬಾರಿಯ ಚಾಂಪಿಯನ್ ಆದಿತ್ಯ ಮೆಹ್ತಾ, 2011ರ `ರನ್ನರ್ ಅಪ್~ ಅಲೋಕ್ ಕುಮಾರ್, ಐಎಚ್ ಮನುದೇವ್, ಮನನ್ ಚಂದ್ರ, ಕಮಲ್ ಚಾವ್ಲಾ ಮತ್ತು ದೇವೇಂದ್ರ ಜೋಶಿ ಸುಲಭ ಜಯ ಪಡೆದರು. ಎಲ್ಲರೂ ತಮ್ಮ ಎದುರಾಳಿಗಳ ಮೇಲೆ ನೇರ ಫ್ರೇಮ್ಗಳ ಜಯ ಗಳಿಸಿದರು.
ಪಿಎಸ್ಪಿಬಿಯನ್ನು ಪ್ರತಿನಿಧಿಸುತ್ತಿರುವ ಆದಿತ್ಯ ಮೆಹ್ತಾ 84-28, 90-0, 64-14 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮೇಶ್ ಅವರನ್ನು ಮಣಿಸಿದರೆ, ಅಲೋಕ್ ಕುಮಾರ್ 61-6, 48-34, 55-2 ರಲ್ಲಿ ಮಿಜೋರಾಂನ ಪೀಟರ್ ಲಾಲ್ರಿನ್ಲುವಾಂಗ ವಿರುದ್ಧ ಗೆಲುವು ಪಡೆದರು.
ಕರ್ನಾಟಕದ ಐ.ಎಚ್. ಮನುದೇವ್ 91-33, 82-14, 69-26 ರಲ್ಲಿ ಮಧ್ಯ ಪ್ರದೇಶದ ಪ್ರತೀಕ್ ಜೈನ್ ವಿರುದ್ಧವೂ, ಎಂ. ಯೋಗೇಶ್ ಕುಮಾರ್ 22-87, 32-71, 72-26, 62-31, 76-36 ರಲ್ಲಿ ಮಹಾರಾಷ್ಟ್ರದ ಸಾರಂಗ್ ಶ್ರಾಫ್ ಮೇಲೂ ಜಯ ಸಾಧಿಸಿದರು.