ರಾಮನಗರ: ವಿಧಾನಸಭೆಯಲ್ಲಿ ಸಂಖ್ಯಾಬಲ ಇಲ್ಲದ ಕಾರಣ ವಿಧಾನಸಭಾ ಅಧ್ಯಕ್ಷರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ವ್ಯರ್ಥವಾಗುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕಗ್ಗಲಹಳ್ಳಿಯ ಮಾರಮ್ಮ ದೇವಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಬಿಜೆಪಿಗೆ ಸಂಖ್ಯಾ ಬಲ ಇರುವ ಕಾರಣ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೂ ಪ್ರಯೋಜನ ಆಗುವುದಿಲ್ಲ. ಹಾಗಾಗಿ ಈ ವಿಷಯದಲ್ಲಿ ಹೋರಾಡುವುದು ವ್ಯರ್ಥ ಎಂಬುದನ್ನು ಜೆಡಿಎಸ್ ಅರಿತಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸು ವುದು, ಭ್ರಷ್ಟಾಚಾರದಲ್ಲಿ ತೊಡಗಿ ಹಣ ದೋಚು ವುದು ಬಿಜೆಪಿಯ ಕಾರ್ಯತಂತ್ರವಾಗಿದೆ. ಇಂತಹವರ ವಿರುದ್ಧ ಚುನಾವಣೆಯಲ್ಲಿ ಹೋರಾಟ ಮಾಡಿ ಪಾಠ ಕಲಿಸಬೇಕಿದೆ ಎಂದರು.
ಪಂಚಾಯಿತಿ ಹಂತದಿಂದ ಸಭೆ
ರಾಮನಗರ ಜಿಲ್ಲೆಯಲ್ಲಿ ಪಂಚಾಯಿತಿ ಹಂತದಿಂದ ಸಭೆಗಳನ್ನು ನಡೆಸಿ ನಂತರ ರಾಜ್ಯ ಮಟ್ಟದ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಎಚ್ಚರಿಕೆ ಗಂಟೆ
ಜೆಡಿಎಸ್ನಲ್ಲಿ ಇದ್ದುಕೊಂಡು ಪಕ್ಷ ದ್ರೋಹಿ ಚಟುವಟಿಕೆ ಮಾಡುವವರನ್ನು ಸಹಿಸಲು ಆಗು ವುದಿಲ್ಲ. ಚನ್ನಪಟ್ಟಣದ ಮುಖಂಡ ರಾಮಚಂದ್ರ ಅವರ ಮೇಲೆ ಪಕ್ಷ ತೆಗೆದುಕೊಂಡಿರುವ ನಿರ್ಧಾರ ಇತರರಿಗೆ ಎಚ್ಚರಿಕೆಯ ಗಂಟೆಯಿದ್ದಂತೆ ಎಂದು ಕುಮಾರಸ್ವಾಮಿ ಹೇಳಿದರು.
ರಾಮಚಂದ್ರ ಅವರಿಗೆ ತಪ್ಪು ತಿದ್ದಿಕೊಳ್ಳಲು ಸಮಯ ನೀಡಿದರೂ ಪ್ರಯೋಜನವಾಗಲಿಲ್ಲ. ಪಕ್ಷದ ಶಿಸ್ತು, ನಿಯಮ ಉಲ್ಲಂಘಿಸಿ ದ್ರೋಹ ಮಾಡಿದರೆ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳಲೇ ಬೇಕಾ ಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರ ಮತ್ತು ರೈತಪರ ಸರ್ಕಾರ ತರುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಕಾರಣ ರಾಮನಗರ ಜಿಲ್ಲೆಗೆ ಹೆಚ್ಚು ಒತ್ತು ಕೊಡಲು ಆಗುತ್ತಿಲ್ಲ ಎಂಬ ಕೊರಗು ನನ್ನಲ್ಲಿದೆ. ಈ ಭಾಗವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ನಿರ್ಲಕ್ಷಿಸಿದರೆ ಹೆತ್ತವರಿಗೆ ಮೋಸ ಮಾಡಿದಂತೆ ಎಂದರು.
ವಿಶ್ವ ಒಕ್ಕಲಿಗ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಜೆಡಿಎಸ್ ಮುಖಂಡರಾದ ಸುರೇಶ್ ಬಾಬು, ಚಂದ್ರಣ್ಣ, ನರಸಿಂಹಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.