ಶ್ರೀರಂಗಪಟ್ಟಣ: ಕಲ್ಲು ಬಂಡೆ ಸ್ಫೋಟಿಸುವ ವಸ್ತುಗಳನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಶ್ರೀರಾಂಪುರದಲ್ಲಿ ಗುರುವಾರ ಬಂಧಿಸಿದ್ದಾರೆ.
ಗ್ರಾಮದ ರಾಜು ಎಂಬುವವರ ಮಗ ಮೂರ್ತಿ ಬಂಧಿತ ವ್ಯಕ್ತಿ. ಮೂರ್ತಿ ಮನೆಯಿಂದ 40 ಕೆ.ಜಿ ಮದ್ದಿನ ಪುಡಿ (ಅಮೋನಿಯಂ ನೈಟ್ರೇಟ್), 26 ಡಿಟೋನೇಟರ್ಗಳು, 30 ಅಡಿ ಉದ್ದದ, ಸ್ಫೋಟಕ್ಕೆ ಬಳಸುವ ತಂತಿ ಮತ್ತು 35 ಅಡಿ ಉದ್ದದ ಅಲ್ಯೂಮಿನಿಯಂ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ಫೋಟಕ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಆಧರಿಸಿ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜಿ.ಎನ್.ರಮೇಶ್ ನೇತೃತ್ವದ ಪೊಲೀಸರ ತಂಡ ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ. ಕಲ್ಲು ಗಣಿಗಾರಿಕೆ ನಡೆಸುವವರಿಗೆ ಸ್ಫೋಟಕ ಮಾರಾಟ ಮಾಡುತ್ತಿದ್ದುದಾಗಿ ಮೂರ್ತಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.