ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ನೋಡಿ ತಾವೇನೂ ಮಾಡಲಾಗದೇ ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ. ಮೋದಿಯವರು ಸಾರ್ವಜನಿಕರಿಗೆ ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕರೆ ನೀಡುವುದರ ಜೊತೆ ಅಂಬಾನಿ, ಸಚಿನ್ ತೆಂಡೂಲ್ಕರ್ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶವನ್ನು ಸ್ವಚ್ಛಗೊಳಿಸುವುದು ಹಾಗೂ ಇನ್ನಿತರರಿಗೂ ಅದೇ ರೀತಿ ಮಾಡುವಂತೆ ಕರೆ ನೀಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಲು ಆಹ್ವಾನಿಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.
ಹೆಚ್ಚಿನವರು ಸಾರ್ವಜನಿಕವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಪ್ರಧಾನಿಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲ, ಸಾರ್ವಜನಿಕರ ಸಹಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛತೆಯ ವಿಷಯದ ಕುರಿತ ಪ್ರಚಾರ... ಈ ರೀತಿಯ ಕ್ರಮಗಳು ಕಸ ನಿರ್ವಹಣೆಯ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತಗಳಿಗೆ ಹಾಗೂ ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದ ಜನರಿಗೂ ಒಂದಷ್ಟು ಒತ್ತಡ ಉಂಟುಮಾಡಿವೆ. ಆದರೆ ಇವಿಷ್ಟೇ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುತ್ತವೆಯೇ ಎಂಬುದು ಪ್ರಮುಖ ಪ್ರಶ್ನೆ.
ನಮ್ಮ ದೇಶದ ಹೆಚ್ಚಿನ ನಾಗರಿಕರ ಸಾರ್ವಜನಿಕ ನಡವಳಿಕೆಗಳಾದ ಎಲ್ಲೆಂದರಲ್ಲಿ ಉಗುಳುವುದು, ಕಸ ಬಿಸಾಡುವುದು, ಸರದಿ ಸಾಲನ್ನು ಮುರಿಯುವುದು, ಸಾರ್ವಜನಿಕ ಆಸ್ತಿಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಇವುಗಳಿಗೆ ಕೆಲವೊಮ್ಮೆ ತಿಳಿವಳಿಕೆಯ ಕೊರತೆ ಕಾರಣವಾದರೆ, ಇನ್ನೂ ಕೆಲವೊಮ್ಮೆ ಅಂತಹ ರೂಢಿಗತ ನಡವಳಿಕೆಗಳು ಅಭ್ಯಾಸವಾಗಿರುವುದು ಪ್ರಮುಖ ಕಾರಣ ಎನ್ನಬಹುದು. ಮನೋವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ ಪುನರಾವರ್ತಿತ ಕ್ರಿಯೆ ಅಥವಾ ವರ್ತನೆಗಳು ನಿಧಾನವಾಗಿ ಅಭ್ಯಾಸ ಅಥವಾ ಹವ್ಯಾಸಗಳಾಗಿ ರೂಢಿಯಾಗುತ್ತವೆ. ನಾವು ತೋರುವ ದೋಷಪೂರಿತ ನಡವಳಿಕೆಗಳಿಗೆ ಈ ಹಿಂದೆ ಯಾವುದೇ ದಂಡ ಅಥವಾ ಶಿಕ್ಷೆ ವಿಧಿಸದೇ ಇರುವುದೂ ಅದು ಮುಂದುವರೆಯಲು ಒಂದು ಪ್ರಮುಖ ಕಾರಣವಾಗಿದೆ.
ಒಮ್ಮೆ ಇಂತಹ ನಡವಳಿಕೆಗಳು ರೂಢಿಯಾಗಿ ಬಿಟ್ಟರೆ ಅವುಗಳಿಂದ ಬಿಡಿಸಿಕೊಳ್ಳುವುದು ಅಸಾಧ್ಯವಲ್ಲವೆಂದರೂ ಸ್ವಲ್ಪ ಕಠಿಣವೇ ಸರಿ. ಈ ಹಿನ್ನೆಲೆಯಿಂದ ಗಮನಿಸಿದಲ್ಲಿ ಹೆಚ್ಚಿನ ಪಾಲು ಸುಶಿಕ್ಷಿತರೇ ಇರುವ ಬೆಂಗಳೂರಿನ ನಾಗರಿಕರು ಯಾಕೆ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ? ಮೂಲದಲ್ಲೇ ಹಸಿ ಕಸ, ಒಣ ಕಸವೆಂದು ಏಕೆ ಬೇರ್ಪಡಿಸುವುದಿಲ್ಲ? ಎಂಬ ಪ್ರಶ್ನೆಗಳೇಳುತ್ತವೆ. ಕೆಲವು ವರ್ಷಗಳ ಹಿಂದೆ ಇಡೀ ದೇಶಕ್ಕೇ ಕಸದ ಸಂಗ್ರಹಣೆಯ ವಿಷಯದಲ್ಲಿ ಬೆಂಗಳೂರಿನ ಸಾಧನೆಯು ಉತ್ತಮವಾಗಿಯೇ ಇತ್ತು. ರಸ್ತೆಯ ಮೂಲೆಯಲ್ಲಿರಿಸಿರುತ್ತಿದ್ದ ದೊಡ್ಡ ತೊಟ್ಟಿಗಳಿಗೆ ಜನ ಕಸ ಸುರಿಯುತ್ತಿದ್ದುದನ್ನು ತಪ್ಪಿಸಲಾಯಿತು. ನಂತರ ಮನೆ ಮನೆಯ ಮುಂದೆ ತಳ್ಳು ಗಾಡಿಯು ಬಂದು ಗಂಟೆಯ ಶಬ್ದ ಮಾಡುತ್ತಿತ್ತು. ಶಬ್ದ ಕೇಳಿ ಹೊರಬರುತ್ತಿದ್ದ ಜನರು ಕಸವನ್ನು ನೀಡುತ್ತಿದ್ದರು.
ಬೆಂಗಳೂರಿನ ಜನಸಂಖ್ಯೆ ಏರಿದಂತೆ ತಳ್ಳುವ ಗಾಡಿ ಬದಲು, ಚಿಕ್ಕ ವಾಹನಗಳು ಮನೆಯ ಮುಂದೆ ಬಂದು ಕಸ ಸಂಗ್ರಹಿಸುವುದು ಪ್ರಾರಂಭವಾಯಿತು. ಹೀಗೆ ಸಂಗ್ರಹಿಸಿದ ಕಸ ಗುಡ್ಡ, ಪರ್ವತವಾಗಿ ಬೆಳೆದು, ಸಮರ್ಪಕವಾದ ಹಾಗೂ ವೈಜ್ಞಾನಿಕವಾದ ವಿಲೇವಾರಿಯ ವ್ಯವಸ್ಥೆಯಿಲ್ಲದೆ ಕಸವನ್ನು ಒಂದೆಡೆ ಶೇಖರಿಸಿ ಇಡಲಾಯಿತು. ಇದರ ಜೊತೆ ಪ್ರತಿದಿನ ಬರುತ್ತಿದ್ದ ಕಸದ ವಾಹನ ಆಗಾಗ್ಗೆ ಕೈ ಕೊಡತೊಡಗಿತು. ಮನೆಯ ಮುಂದೆ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ತಳ್ಳುಗಾಡಿಗೆ ತಪ್ಪದೆ ಕಸ ನೀಡುತ್ತಿದ್ದ ಜನರು ಒಮ್ಮೆ ಬಂದು ಮತ್ತೊಮ್ಮೆ ಬಾರದ, ಸರಿಯಾಗಿ ಮನೆಯ ಮುಂದೆ ನಿಲ್ಲಿಸದ ಚಿಕ್ಕ ವಾಹನಕ್ಕೆ ಕಸ ತಲುಪಿಸುವಲ್ಲಿ ತೊಂದರೆ ಅನುಭವಿಸಬೇಕಾಯಿತು. ಇದರಿಂದ ರಸ್ತೆಯ ಮೂಲೆಯಲ್ಲಿ ಕಸವನ್ನು ಚೀಲ ಅಥವಾ ಪ್ಲಾಸ್ಟಿಕ್ ಕವರ್ಗಳಲ್ಲಿರಿಸಿ ಎಸೆಯತೊಡಗಿದರು. ಪಾಪ! ಅವರು ತಾನೇ ಕಸವನ್ನು ಎಷ್ಟು ದಿನ ಮನೆಯಲ್ಲಿಟ್ಟುಕೊಂಡಾರು? ಜನ ಎಸೆದ ಚೀಲಗಳನ್ನು ನಾಯಿಗಳು ಎಳೆದಾಡಿ, ಮೂಲೆಯಲ್ಲಿದ್ದ ಕಸ ಇಡೀ ರಸ್ತೆಗೆ ವ್ಯಾಪಿಸುವ ಜೊತೆ ಒಂದು ರೀತಿಯ ದುರ್ವಾಸನೆ ಹರಡಿತು.
ಇನ್ನು ಕಸವನ್ನು ವಿಂಗಡಿಸಲು ಈಗ್ಗೆ ಕೆಲವು ತಿಂಗಳುಗಳ ಹಿಂದೆ ಬಿ.ಬಿ.ಎಂ.ಪಿ, ಅಭಿಯಾನ ಪ್ರಾರಂಭಿಸಿತ್ತು. ಆದರೆ ಅದರಿಂದ ಹೆಚ್ಚೇನೂ ಲಾಭವಾಗಲಿಲ್ಲ. ಜನರು ಬೇರ್ಪಡಿಸಿದ ಕಸವನ್ನು ಮತ್ತೆ ಜತೆಗೂಡಿಸಿಕೊಳ್ಳುತ್ತಿದ್ದ ಕಸ ಸಂಗ್ರ ಹಣೆಯ ವಾಹನವನ್ನು ನೋಡಿದ ಜನ ವಿಂಗಡಣೆಯ ಗೋಜನ್ನೇ ಬಿಟ್ಟರು. ಇಲ್ಲಿ ನಾನು ಹೇಳ ಹೊರಟಿರುವುದು ಜನರು ಮಾಡಿಕೊಳ್ಳುವ ಅಭ್ಯಾಸಗಳಿಗೆ ಕಸ ನಿರ್ವಹಣೆಯ ಹೊಣೆ ಹೊತ್ತ ವ್ಯವಸ್ಥೆ ಹೇಗೆ ಕಾರಣವಾಗುತ್ತದೆ ಹಾಗೂ ತನ್ಮೂಲಕ ಯಾವ ರೀತಿ ಸಮಸ್ಯೆಯ ತೀವ್ರತೆ-ಯನ್ನು ಹೆಚ್ಚಿಸುತ್ತದೆ ಎಂಬುದರ ಕುರಿತು. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಪ್ರಭಾವಿ ವ್ಯಕ್ತಿಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಸಾಂಕೇತಿಕ ಸ್ವಚ್ಛಗೊಳಿಸುವಿಕೆ, ಉತ್ಸಾಹಿ ನಾಗರಿಕರ ತೊಡಗಿಸಿಕೊಳ್ಳುವಿಕೆ ಹಾಗೂ ಮಾಧ್ಯಮ, ಜಾಲತಾಣಗಳಲ್ಲಿ ಪ್ರಚಾರ ಮುಂತಾದವುಗಳಿಂದಷ್ಟೇ ‘ಸ್ವಚ್ಛ ಭಾರತ ಅಭಿಯಾನ’ ಯಶಸ್ವಿ ಆಗುತ್ತದೆ ಎಂದು ನಿರೀಕ್ಷಿಸಲಾಗದು.
ಏಕೆಂದರೆ ಸಾಂಕೇತಿಕ ಆಚರಣೆಗಳು ನಮ್ಮಲ್ಲಿರಬಹುದಾದ ಸಮಾಜ ಸೇವೆಯ ತುಡಿತಗಳನ್ನು ಹೆಚ್ಚು ಮಾಡಬಹುದೇ ಹೊರತು ಅದರಿಂದಲೇ ಸಮಸ್ಯೆ ಪೂರ್ಣ ನಿವಾರಣೆ ಆಗುವುದಿಲ್ಲ. ಎಷ್ಟೇ ಆಗಲಿ ವ್ಯವಸ್ಥೆಗೆ ವ್ಯಕ್ತಿ ಪರ್ಯಾಯವಾಗಲು ಸಾಧ್ಯವಿಲ್ಲ. ಅದರಲ್ಲೂ ಕಸನಿರ್ವಹಣೆಯಂತಹ ವಿಷಯಗಳು ಒಮ್ಮೆ ಕೈಗೊಂಡು ಪೂರ್ಣಗೊಳಿಸುವಂಥದ್ದಲ್ಲ. ಬದಲಾಗಿ ದಿನನಿತ್ಯ ವ್ಯವಸ್ಥಿತವಾದ ಶ್ರಮ ಹಾಗೂ ನಿರಂತರ ಮೇಲುಸ್ತುವಾರಿ ಬೇಡುವ ವಿಷಯಗಳಾಗಿವೆ. ಹಾಗಾದರೆ ಈ ರೀತಿಯ ಅಭಿಯಾನಗಳಿಂದ ಪ್ರಯೋಜನವಿಲ್ಲ ಎಂದಲ್ಲ. ಖಂಡಿತವಾಗಿಯೂ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಿಲ್ಲದೇ ಯಾವುದೇ ಯೋಜನೆ ಯಶಸ್ವಿಯಾಗದು. ಹಾಗಾದರೆ ಮಾಡಬೇಕಿರುವುದೇನು? ಕಸ ಸಂಗ್ರಹಣೆ ಹಾಗೂ ಅದರ ವೈಜ್ಞಾನಿಕ ನಿರ್ವಹಣೆಯು ಆಧುನಿಕ ಜಗತ್ತಿನ ಸಂಕೀರ್ಣತೆಯನ್ನೊಳಗೊಂಡ ಹಲವು ಸವಾಲುಗಳಲ್ಲೊಂದು.
ಈ ಸಮಸ್ಯೆಗೆ ದೂರದೃಷ್ಟಿ ಒಳಗೊಂಡ ವ್ಯವಸ್ಥಿತವಾದ ಯೋಜನೆಯ ಅಗತ್ಯವಿದೆ. ಯೋಜನೆ ಹಾಗೂ ಅದಕ್ಕನುಸರಿಸಬೇಕಾದ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸಲು ತ್ಯಾಜ್ಯ ಸಂಗ್ರಹಣೆ ಹಾಗೂ ಅದರ ನಿರ್ವಹಣೆಯ ವಿಷಯದಲ್ಲಿ ತಜ್ಞತೆ ಹೊಂದಿದ ಅನುಭವಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯಬೇಕು. ಈ ಯೋಜನೆಯ ಆಧಾರದ ಮೇಲೆ ರಾಷ್ಟ್ರ ಹಂತದಲ್ಲಿ ಒಂದು ಬಿಗಿ ಕಾನೂನಿನ ರಚನೆಯಾಗಬೇಕು. ಇದರ ಅಡಿಯಲ್ಲಿಯೇ ಪ್ಲಾಸ್ಟಿಕ್ ಬಳಕೆಯನ್ನು ರದ್ದುಗೊಳಿಸಲು ಅಥವಾ ಮಿತಿಗೊಳಿಸಲು, ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದನ್ನು ನಿಯಂತ್ರಿಸಲು ವಿವರವಾದ ಕಾರ್ಯ ತಂತ್ರವಿರಬೇಕು.
ಕುಟುಂಬದ ಹಂತದಲ್ಲಿ ತ್ಯಾಜ್ಯ ವಿಂಗಡಣೆಯ ವಿಧಾನ, ಕುಟುಂಬದಿಂದ ಸ್ಥಳೀಯ ಆಡಳಿತವು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುಸರಿಸುವ ವಿಧಾನಗಳ ಕುರಿತ ಸಮಗ್ರ ಅಂಶಗಳನ್ನು ನೂತನ ಕಾನೂನು ಹೊಂದಿರಬೇಕು. ಈ ಕಾನೂನನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡದ ಪ್ರಮಾಣಗಳ ವಿವರಗಳು ಹಾಗೂ ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆ ಕುರಿತಂತೆ ವ್ಯಾಪಕ ಪ್ರಚಾರ ನೀಡಬೇಕು. ಕಾನೂನನ್ನು ಉಲ್ಲಂಘಿಸುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನೀಡುವ ಮೂಲಕ ಅವರ ಕ್ರಮಗಳನ್ನು ನಿರುತ್ತೇಜಿಸಬೇಕು. ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಯ ಕುರಿತಂತೆ ಜಾಗೃತಿ, ಪರಿಣಾಮಕಾರಿ ಕಾನೂನಿನ ಅನುಷ್ಠಾನ, ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಮತ್ತು ಸರಿದಾರಿಗೆ ಬಾರದ ಜನರಿಗೆ ಜಾಗೃತ ನಾಗರಿಕರಿಂದ ಜಾಲತಾಣ, ಮಾಧ್ಯಮಗಳ ಮೂಲಕ ಛೀಮಾರಿ. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ಬಳಸಿಕೊಳ್ಳುವುದು.. ಈ ರೀತಿಯ ಕ್ರಮಗಳು ಸ್ವಚ್ಛ ಭಾರತದ ಸಾಕಾರಕ್ಕೆ ಸಹಕಾರಿ ಆಗುವುದರಲ್ಲಿ ಸಂದೇಹವಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.