ಹಿರಿಯೂರು: ಸ್ವಾತಂತ್ರ್ಯ ಹೋರಾಟಗಾರ, ಮಕ್ಕಳ ಪ್ರೀತಿಯ ಚಾಕೊಲೇಟ್ ಅಜ್ಜ, ಶತಾಯುಷಿ ಗೋವಿಂದಸ್ವಾಮಿ ನಾಯ್ಡು (103) ಶುಕ್ರವಾರ ಹಿರಿಯೂರಿನಲ್ಲಿ ನಿಧನರಾದರು.
ಅವರ ಪತ್ನಿ ಗಂಗಮ್ಮ, ಹಿರಿಯ ಪುತ್ರ ಈ ಹಿಂದೆಯೇ ಮೃತಪಟ್ಟಿದ್ದರು. ಕಿರಿಯ ಪುತ್ರ ಕಣ್ಮರೆಯಾಗಿದ್ದು, ಪತ್ತೆಯಾಗಿಲ್ಲ. 1909ರಲ್ಲಿ ಜನಿಸಿದ ನಾಯ್ಡು 1938ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. 1939ರಲ್ಲಿ ಕಾಟನಾಯಕನಹಳ್ಳಿ ಅರಣ್ಯ ಸತ್ಯಾಗ್ರಹದಲ್ಲಿ ನೂರಾರು ಈಚಲು ಮರ ಕತ್ತರಿಸಿ ಗಾಂಧೀಜಿಗೆ ಜೈಕಾರ ಹಾಕಿದ್ದಕ್ಕೆ ಜೈಲಿಗೆ ಹಾಕಲಾಗಿತ್ತು. 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂ ಡಿದ್ದರು.
ಸಂಬಂಧಿಗಳು ಇಲ್ಲದ ಕಾರಣ ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ. ಮಾಧವ ಅವರ ಮನೆಯಲ್ಲಿ ನೆಲೆಸಿದ್ದ ನಾಯ್ಡು ಅವರು, ಮಕ್ಕಳಿಗೆ ಪ್ರೀತಿಯ ಚಾಕೊಲೇಟ್ ತಾತ ಆಗಿದ್ದರು.
ಖಾದಿ ಜುಬ್ಬದ ಜೇಬಿನ ತುಂಬಾ ಸಿಹಿ ಇಟ್ಟುಕೊಂಡು ರಸ್ತೆಯಲ್ಲಿ ಸಿಗುವ ಮಕ್ಕಳಿಗೆ ಹಂಚುತ್ತಿದ್ದರು. ನಂಜಯ್ಯನಕೊಟ್ಟಿಗೆ ಸಮೀಪದ ಜಮೀನಿನಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು