ಚನ್ನರಾಯಪಟ್ಟಣ: ರೈತರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಬೇಕು ಎಂದು ಭಾರತೀಯ ಸಾವಯವ ಬೇಸಾಯ ಸಂಘಟನೆಯ ಮಾಜಿ ಅಧ್ಯಕ್ಷ ಡಿ.ಡಿ. ಭರಮೇಗೌಡ ಕರೆ ನೀಡಿದರು.
ಕಲ್ಪತರು ಗ್ರಾಮೀಣ ವಿಕಾಸ ಸಂಸ್ಥೆಯ ವತಿಯಿಂದ ಸಂತೇಶಿವರದ ಸಾವಯವ ಕೃಷಿಕ ಬಸವರಾಜು ತೋಟದಲ್ಲಿ ಏರ್ಪಡಿಸಿದ್ದ `ಸಾಂಪ್ರದಾಯಕ ಕೃಷಿ ಮಂಥನ ಕಾರ್ಯಕ್ರಮ~ದಲ್ಲಿ ಅವರು ಮಾತನಾಡಿದರು.
ರೈತರು ದೇಸಿ ತಳಿಯ ಬಿತ್ತನೆ ಬೀಜಗಳನ್ನು ಬಿತ್ತಬೇಕು. ಬೆಳೆಗಳಿಗೆ ತಗಲುವ ರೋಗಗಳ ನಿವಾರಣೆಗೆ ಸಾಂಪ್ರದಾಯಿಕ ಪರಿಹಾರ ಕಂಡುಕೊಳ್ಳಬೇಕು. ಸಾವಯವ ಕೃಷಿಗೆ ಮಹತ್ವ ನೀಡಿ, ಮಣ್ಣನ್ನು ವಿಷಮುಕ್ತಗೊಳಿಸಬೇಕು ಎಂದರು.
ಸಾವಯಕ ಕೃಷಿಕ ಬಿ. ಬಸವರಾಜು ಮಾತನಾಡಿ, 1980ರಿಂದ 5.36 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ತಿಪಟೂರು ಕಲ್ಪತರು ಕಾಲೇಜಿನ ನಿವೃತ್ತ ಪ್ರಾಚಾರ್ಯ ನಂಜುಂಡಪ್ಪ ಮಾತನಾಡಿದರು. ಭಾರತೀಯ ಸಾವಯವ ಬೇಸಾಯ ಸಂಘಟನೆಯ ಕಾರ್ಯದರ್ಶಿ ಪಿ. ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ. ಪುಟ್ಟರಾಜು, ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ವಿ.ಗಾಯತ್ರಿ ಮಾತನಾಡಿದರು.