ಬೆಂಗಳೂರು: ಸಮುದ್ರ ತೀರದಲ್ಲಿ ವಿಹಾರಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ವಿಪ್ರೊ ಕಂಪೆನಿ ಉದ್ಯೋಗಿಯೊಬ್ಬರು ಸ್ವೀಡನ್ ದೇಶದಲ್ಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಬಸವನಗುಡಿ ಸಮೀಪದ ಒವಿಎಚ್ ರಸ್ತೆ ನಿವಾಸಿ ಜಯಪ್ರಕಾಶ್ (30) ಮೃತಪಟ್ಟವರು. ವಿಪ್ರೊ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಪತ್ನಿ ಅನುಪಮಾ ಹಾಗೂ ಮಗಳು ಸೃಷ್ಠಿ ಜತೆ ನಾಲ್ಕು ವರ್ಷಗಳಿಂದ ಸ್ವೀಡನ್ ದೇಶದಲ್ಲಿ ನೆಲೆಸಿದ್ದರು.
ಜುಲೈ 6ರಂದು ಪತ್ನಿ-ಮಗಳೊಂದಿಗೆ ಸ್ಟಾಕ್ಹೋಮ್ ನಗರ ಸಮೀಪದ ಸಮುದ್ರ ತೀರಕ್ಕೆ ಹೋಗಿದ್ದ ಅವರು ಸಮುದ್ರದ ದಡದಲ್ಲಿರುವ ರಿಫ್ರೆಶ್ಮೆಂಟ್ ಸೆಂಟರ್ನಲ್ಲಿ ಸ್ನಾನ ಮಾಡುವಾಗ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಜುಲೈ 6ರ ಶನಿವಾರ ಜಯಪ್ರಕಾಶ್ ಅವರ ಕುಟುಂಬ ಬೆಳಿಗ್ಗೆಯಿಂದ ಸಂಜೆವರೆಗೂ ಸಮುದ್ರದ ಕಿನ್ನಾರೆಯಲ್ಲೇ ವಿಹರಿಸಿತ್ತು. ಉಪ್ಪು ನೀರಿನಲ್ಲಿ ಆಟವಾಡಿದ್ದರಿಂದ ಮನೆಗೆ ತೆರಳುವ ಮುನ್ನ ಜಯಪ್ರಕಾಶ್ ಸ್ನಾನ ಮಾಡಿಕೊಂಡು ಬರುವುದಾಗಿ ರಿಫ್ರೆಶ್ಮೆಂಟ್ ಸೆಂಟರ್ಗೆ ಹೋದರು. ತುಂಬಾ ಸಮಯ ಕಳೆದರೂ ಪತಿ ವಾಪಸ್ ಬಾರದ ಕಾರಣ ಅನುಪಮಾ ಅವರು ಸೆಂಟರ್ನೊಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
`ಮೂರು ದಿನ ಕಳೆದರೂ ಜಯಪ್ರಕಾಶ್ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ವಿಪ್ರೊ ಸಂಸ್ಥೆ ಅಧಿಕಾರಿಗಳು ಅವರ ಬಗ್ಗೆ ವಿಚಾರಿಸಲು ಆರಂಭಿಸಿದ್ದರು. ತಮ್ಮ ಉದ್ಯೋಗಿ ಮೃತಪಟ್ಟಿರುವ ವಿಷಯವನ್ನು ಸ್ಥಳೀಯ ಪೊಲೀಸರಿಂದ ತಿಳಿದುಕೊಂಡ ಅಧಿಕಾರಿಗಳು, ಕುಟುಂಬ ಸದಸ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದರು. ನಂತರ ಸೋದರ ರವಿಕಿರಣ್ ಸ್ವೀಡನ್ ದೇಶಕ್ಕೆ ತೆರಳಿ ಅಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ' ಎಂದು ಮೃತರ ಮತ್ತೊಬ್ಬ ಸಹೋದರ ಹರಿಚರಣ್ ತಿಳಿಸಿದರು.