ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ ರದ್ದು ಖಂಡನೀಯ

Last Updated 4 ಫೆಬ್ರುವರಿ 2012, 4:40 IST
ಅಕ್ಷರ ಗಾತ್ರ

ಬಳ್ಳಾರಿ: ಬಡ ಜಾನಪದ ಕಲಾವಿದರ ಒಂದು ತಿಂಗಳಿನ ಜೀವನ ನಡೆಸುವಷ್ಟು ಸಂಭಾವನೆಯನ್ನು ದೊರಕಿಸಿ ಕೊಡುತ್ತಿದ್ದ ಹಂಪಿ ಉತ್ಸವವವನ್ನು ಬರಗಾಲದ ನೆಪದಲ್ಲಿ ರದ್ದುಪಡಿಸಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಲೇಖಕ ವೀರೇಶ ಬಳ್ಳಾರಿ ಅಭಿಪ್ರಾಯ ಪಟ್ಟರು.

ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಹಾಗೂ ದಲಿತ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಏರ್ಪಡಿಸಲಾಗಿದ್ದ `ಬಳ್ಳಾರಿ ತಾಲ್ಲೂಕಿನ ಸ್ಥಳನಾಮಗಳು~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಆಯಾ ಭಾಗದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಪರಂಪರೆಯನ್ನು ಸಾರುವುದಲ್ಲದೆ, ಬಡ ಕಲಾವಿದರಿಗೆ ನೆರವು ನೀಡಲೆಂದೇ ಹಮ್ಮಿಕೊಳ್ಳ ಲಾಗುವ ಉತ್ಸವಗಳನ್ನು ರದ್ದು ಮಾಡಿರುವ ಮುಖ್ಯಮಂತ್ರಿ ಹಾಗೂ ಸಚಿವರು ಬರದ ಹಿನ್ನೆಲೆಯಲ್ಲಿ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಿದ್ದಾರೆಯೇ? ಹೆಲಿಕಾಪ್ಟರ್‌ಗಳಲ್ಲಿ ಓಡಾಡುವುದನ್ನು ನಿಲ್ಲಿಸಿದ್ದಾರೆಯೇ? ಶಾಸಕರು, ಸಚಿವರು, ಅಧಿಕಾರಿಗಳ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆಯೇ? ಎಂದು ಅವರು ಪ್ರಶ್ನಿಸಿದರು.

ಹಿಂದಿ ಗಾಯಕ ಸೋನು ನಿಗಂ, ಚಿತ್ರನಟ ಸಾಯಿಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ ಮತ್ತಿತರ ಖ್ಯಾತರನ್ನು ಕರೆಯಿಸಿ ಲಕ್ಷಾಂತರ ರೂಪಾಯಿ ಸಂಭಾವನೆ ಕೊಡುವುದನ್ನು ಬಿಟ್ಟು, ಜಿಲ್ಲೆಯ ಬಡ ಜಾನಪದ, ರಂಗಭೂಮಿ ಕಲಾವಿದರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಸರಳವಾಗಿ ಯಾದರೂ ಹಂಪಿ ಉತ್ಸವವನ್ನು ಆಯೋಜಿಸಬೇಕು. ಬರಗಾಲದ ನೆಪದಲ್ಲಿ ಉತ್ಸವಗಳನ್ನು ರದ್ದು ಮಾಡಿ, ಬಡ ಕಲಾವಿದರಿಗೆ ನೆರವಾಗುವುದನ್ನು ತಪ್ಪಿಸಿದ್ದು ಸರಿಯಲ್ಲ ಎಂದು ಅವರು ಹೇಳಿದರು.

ವೀರೇಶ ಬಳ್ಳಾರಿ ಅವರು ಬರೆದಿ ರುವ `ಬಳ್ಳಾರಿ ತಾಲ್ಲೂಕಿನ ಸ್ಥಳನಾಮ ಗಳು~ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಥೆಗಾರ ಡಾ.ಅಮರೇಶ ನುಗಡೋಣಿ, ಗ್ರಾಮಗಳ ಚರಿತ್ರೆಯನ್ನು ಅರಿತುಕೊಳ್ಳಲು ಸಹಾಯಕವಾಗುವ ಈ ಸಂಶೋಧನಾ ಗ್ರಂಥವು ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಡನೆ ಯಾಗಿದ್ದರೂ, ತಾಲ್ಲೂಕಿನ ಜನ ಸಾಮಾನ್ಯರು ತಮ್ಮತಮ್ಮ ಊರುಗಳ ಇತಿಹಾಸದ ಕುರಿತು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಬಸವಲಿಂಗಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಶಕಗಳ ಹಿಂದೆ ಕಲಿಸಿದ ಶಿಕ್ಷಕನನ್ನು ಮರೆಯದೆ, ತಮ್ಮ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಲು ಆಹ್ವಾನಿಸಿರುವ ಶಿಷ್ಯ ಸಮೂಹ ದಿಂದಲೇ ಸದಾ ಶಿಕ್ಷಕ ಸಮೂಹಕ್ಕೆ ಈಗಲೂ ಗೌರವವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಲು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಬಸವಲಿಂಗಯ್ಯ ಅವರನ್ನು ಕರೆತಂದಿರುವುದು ಅಭಿನಂದನೀಯ. ಪ್ರಾಥಮಿಕ ಹಂತದಲ್ಲಿ ಬೋಧಿಸಿದ ಗುರುವಿನ ಮಾರ್ಗದರ್ಶನ ಯಾವುದೇ ವಿದ್ಯಾರ್ಥಿಯು  ಭವಿಷ್ಯ ರೂಪಿಸಿ ಕೊಳ್ಳಲು ನೆರವಾಗುತ್ತದೆ ಎಂಬುದನ್ನು ಸ್ಮರಿಸುವ  ಇಂತಹ ಶಿಷ್ಯಸಮೂಹ ಇತರರಿಗೆ ಮಾದರಿಯಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಹೇಳಿದರು.

ಕವಯತ್ರಿ ಎನ್.ಡಿ. ವೆಂಕಮ್ಮ, ಸ್ನೇಹಸಂಪುಟದ ಕಲ್ಲುಕಂಬ ಪಂಪಾಪತಿ, ಜಾನಪದ ಕಲಾವಿದೆ ಈರಮ್ಮ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ನಿಷ್ಠಿ ಚಿದಂಬರೇಶ ಜನಪದ ಗಾಯನ ಪ್ರಸ್ತುತಪಡಿಸಿದರು.

ದಲಿತ ಅಭಿವೃದ್ಧಿ ಸಂಸ್ಥೆಯ ಗ್ಯಾನಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪಿ.ಆಲಂ ಬಾಷಾ ಕಾರ್ಯಕ್ರಮ ನಿರೂಪಿಸಿದರು. ಜಿ.ಶಿವಕುಮಾರ್ ಸ್ವಾಗತಿಸಿದರು. ಡಾ.ಕುಮಾರಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT