ಬಳ್ಳಾರಿ: ಇದೇ 10ರಿಂದ ಜಿಲ್ಲೆಯ ಹಂಪಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂದು ಹಿರಿಯ ಕಲಾವಿದರು ದೂರಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೃತ್ಯ ಕಲಾವಿದರಾದ ವನಮಾಲಾ ಕುಲಕರ್ಣಿ, ಎಸ್.ಪ್ರೇಮಾ ಮತ್ತಿತರರು, ಈ ಉತ್ಸವ ರಾಜ್ಯಮಟ್ಟದ್ದಾದರೂ, ಜಿಲ್ಲೆಯ ಏಕೈಕ ಸಾಂಸ್ಕೃತಿಕ ಹಬ್ಬವಾಗಿದೆ. ಇಲ್ಲಿ ಅನೇಕ ಕಲಾವಿದರು, ಕಲಾ ತಂಡಗಳಿದ್ದರೂ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೃತ್ಯ ಕಲಾವಿದರಾದ ಬಳ್ಳಾರಿಯ ಜಿಲಾನ್ ಬಾಷಾ ಹಾಗೂ ಇತರರ ತಂಡಗಳಿಗೆ ಉತ್ಸವದಲ್ಲಿ ಪದೇಪದೇ ಅವಕಾಶ ನೀಡಲಾಗುತ್ತಿದ್ದು, ಇನ್ನು ಕೆಲವರನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ, ಸ್ಥಳೀಯ ಶಾಮಿಯಾನಾ ಸಪ್ಲೈಯರ್ಸ್ಗಳು, ಲೈಟ್ ಮತ್ತು ಸೌಂಡ್ ಸಿಸ್ಟಮ್ ಬಾಡಿಗೆಗೆ ನೀಡುವವರು, ಬ್ಯಾನರ್ ಸಿದ್ಧಪಡಿಸುವವರು, ಆಹ್ವಾನ ಪತ್ರಿಕೆ ಮುದ್ರಿಸುವ ಮುದ್ರಕರನ್ನು ನಿರ್ಲಕ್ಷಿಸಲಾಗಿದೆ. ಇಂತಹ ಅಚಾತುರ್ಯ ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
‘ಕನಕ– ಪುರಂದರ ಉತ್ಸವ, ವಾಲ್ಮೀಕಿ ಜಯಂತಿ ಮತ್ತಿತರ ಕಾರ್ಯಕ್ರಮಕ್ಕೆ ನಮ್ಮಿಂದ ಕೆಲಸ ಪಡೆದರೂ ಕಳೆದ ಮೂರು ವರ್ಷಗಳಿಂದ ಹಣ ಪಾವತಿಸಿಲ್ಲ. ಹಂಪಿ ಉತ್ಸವದಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದಾಗ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಲೈಟ್ ಮತ್ತು ಸೌಂಡ್ ಸಿಸ್ಟಮ್ಗಳ ಮಸ್ತಾನ್, ಮಂಜುನಾಥ ದೂರಿದರು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾವಿದ ಬ್ರಹ್ಮಶ್ರೀ ಅಯ್ಯಪ್ಪ ಸ್ವಾಮಿ, ನಾಗಭೂಷಣ್ ಮತ್ತಿತರರಿದ್ದರು.
ಕಳಂಕಿತರನ್ನು ಕೈಬಿಡಲು ಆಗ್ರಹಿಸಿ ಮೌನ ಮೆರವಣಿಗೆ ಬಳ್ಳಾರಿ: ಅಕ್ರಮದಲ್ಲಿ ಭಾಗಿಯಾಗಿರುವ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಕಪ್ಪು ಬಟ್ಟೆ ಧರಿಸಿ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಈ ಕುರಿತ ಮನವಿ ಸಲ್ಲಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ್, ರೋಷನ್ ಬೇಗ್ ವಿರುದ್ಧ ಅಕ್ರಮಗಳ ಆರೋಪವಿದ್ದರೂ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೇ ಈ ಇಬ್ಬರೂ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಎಂ.ಎಸ್. ಸೋಮಲಿಂಗಪ್ಪ, ಕೆ.ಎ. ರಾಮಲಿಂಗಪ್ಪ, ಸಂಜಯ, ಮುರಹರಗೌಡ, ಎಚ್.ಹನುಮಂತಪ್ಪ, ಶಿವಕುಮಾರ, ಪಂತರ್ ಜಯಂತ್, ಸುಧೀರ ಕುಮಾರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.