ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಾರ್ಷಿಕ ರೂ 1.10 ಲಕ್ಷ ಕೋಟಿಯಷ್ಟು ತೆರಿಗೆ ನೀಡುವ ಬೆಂಗಳೂರು ದೇಶದ ಶ್ರೀಮಂತ ನಗರಗಳಲ್ಲಿ ಒಂದು. ಆದರೆ, ಇಲ್ಲಿನ ಸ್ಥಳೀಯ ಆಡಳಿತದ ಹೊಣೆ ಹೊತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾತ್ರ ನಿತ್ಯದ ವೆಚ್ಚಗಳಿಗೂ ತನ್ನ ಆಸ್ತಿಗಳನ್ನು ಅಡವಿಟ್ಟು ಸಾಲದ ಮೂಲಕ ಹಣ ಹೊಂದಿಸಬೇಕಾದಷ್ಟು ಬಡವಾಗಿದೆ.
ಬಿಬಿಎಂಪಿಯ ಈ ದುಃಸ್ಥಿತಿಗೆ ಏನು ಕಾರಣ ಎಂದು ಹುಡುಕುತ್ತಾ ಹೊರಟರೆ, ಹಗರಣಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ಈ ಹಗರಣಗಳ ರಾಡಿ ನೀರಿನಲ್ಲಿ ಮರಿ ಮೀನುಗಳಿವೆ, ತಿಮಿಂಗಿಲಗಳೂ ಇವೆ. ಹಿಡಿಯಲು ಬೀಸಿದ ಬಲೆಯನ್ನೇ ತುಂಡರಿಸಿ ಹೊರಬರುವಷ್ಟು ಚಾಲಾಕಿತನ ಅವುಗಳಿಗೆ ಸಿದ್ಧಿಸಿದೆ.
2001ರಿಂದ 2010ರ ಅವಧಿಯಲ್ಲಿ ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಬಿಬಿಎಂಪಿ ರೂ 10,782 ಕೋಟಿ ವ್ಯಯಿಸಿದೆ. 9,923 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಕಡತಗಳು ‘ಕಥೆ’ ಹೇಳುತ್ತವೆ. ಪ್ರತಿ ಕಿ.ಮೀ. ರಸ್ತೆಗೆ ಒಂದು ಕೋಟಿ ವೆಚ್ಚ ಮಾಡಲಾಗಿದೆ ಎಂದುಕೊಂಡರೂ 10,782 ಕಿ.ಮೀ. ಉದ್ದದ ರಸ್ತೆ ನುಣುಪಾದ ಮೇಲ್ಮೈಯಿಂದ ನಳನಳಿಸಬೇಕಿತ್ತು. ಆದರೆ, ನಗರದ ರಸ್ತೆಗಳು ಹಾಗೂ ಗುಂಡಿಗಳ ನಡುವಿನ ಆಪ್ತವಾದ ಸಹಬಾಳ್ವೆಯು ವರ್ಷಗಳು ಉರುಳಿದಂತೆ ಗಟ್ಟಿಯಾಗುತ್ತಲೇ ಹೊರಟಿದೆ.
ವರ್ಷದ ಅವಧಿಯಲ್ಲಿ ಒಂದು ರಸ್ತೆಗೆ ಎಷ್ಟು ಸಲ ಟಾರು ಹಾಕಬಹುದು? ನೃಪತುಂಗ ರಸ್ತೆಗೆ ಏಕಕಾಲಕ್ಕೆ ಮೂರು ಸಲ ಟಾರು ಹಾಕುವ ‘ಕಾಮಗಾರಿ’ ನಡೆಸಿದ ಶ್ರೇಯ ಬಿಬಿಎಂಪಿಯದು. ವಿಧಾನಸೌಧದಿಂದ ಪಾಲಿಕೆ ಕಚೇರಿ ವರೆಗೆ, ಹಡ್ಸನ್ ವೃತ್ತದಿಂದ ಶಾಂತವೇರಿ ಗೋಪಾಲಗೌಡ ವೃತ್ತದವರೆಗೆ, ಹೈಕೋರ್ಟ್ ಮುಂಭಾಗದಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ... ಹೀಗೆ ಮೂರು ಬೇರೆ ಹೆಸರುಗಳಲ್ಲಿ ಕಾಮಗಾರಿ ಸೃಷ್ಟಿಸಿ ಹಣ ಅಪವ್ಯಯ ಮಾಡಲಾಗಿದೆ. ಈ ಕಾಮಗಾರಿಗಳಿಗೆ ಬಿಡುಗಡೆಯಾದ ಮೊತ್ತ ತಲಾ ರೂ 48 ಲಕ್ಷ!
ನಗರದ ಎಲ್ಲ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಇದೀಗ ರೂ 560 ಕೋಟಿ ಮೊತ್ತದ ಕಾಮಗಾರಿಗಳು ನಡೆದಿವೆ. ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರೇ ಒಂದು ವರ್ಷದವರೆಗೆ ಅದನ್ನು ನಿರ್ವಹಣೆ ಮಾಡಬೇಕೆನ್ನುವುದು ನಿಯಮ. ಇತ್ತ ರಸ್ತೆಗಳಿಗೆ ಟಾರು ಹಾಕಲು ಗುತ್ತಿಗೆ ನೀಡಿದ ಬಿಬಿಎಂಪಿ, ಅತ್ತ ಅದೇ ರಸ್ತೆಗಳ ಗುಂಡಿಗಳಿಗೆ ತೇಪೆ ಹಾಕಲು ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆಗೆ ರೂ 18 ಕೋಟಿ ಮೊತ್ತದ ಗುತ್ತಿಗೆ ಕೊಟ್ಟಿದೆ.
ಜಗತ್ತಿನ ಯಾವ ಭಾಗದಲ್ಲೂ ಒಮ್ಮೆ ಟಾರು ಹಾಕಿದ ರಸ್ತೆಗಳಿಗೆ ಮರು ವರ್ಷ ಮತ್ತೆ ಸಾರಾಸಗಟಾಗಿ ಟಾರು ಹಾಕುವ ಸಂಪ್ರದಾಯ ಇಲ್ಲ. ಐದು ವರ್ಷಗಳಿಗೊಮ್ಮೆ ರಸ್ತೆ ಅಭಿವೃದ್ಧಿ ಮಾಡುವುದು, ಪ್ರತಿ ವರ್ಷ ಅವುಗಳ ನಿರ್ವಹಣೆ ಮಾಡುವುದು ರೂಢಿ. ಆದರೆ, ಬೆಂಗಳೂರಿನ ಹಲವು ರಸ್ತೆಗಳಿಗೆ ಪ್ರತಿವರ್ಷವೂ ಟಾರು ಹಾಕಲಾಗುತ್ತದೆ. ಇದರಿಂದ ರಸ್ತೆ ಮೇಲಿನ ಪದರಗಳು ಬೆಳೆಯುತ್ತಿವೆ, ಗುಂಡಿಗಳು ಆಳವಾಗುತ್ತಿವೆ, ಕಳಪೆ ಕಾಮಗಾರಿಗಳಿಗೆ ಮಾಡಿದ ವೆಚ್ಚದಿಂದ ಸಾಲದ ಭಾರ ಹೆಚ್ಚುತ್ತಾ ಹೋಗುತ್ತಿದೆ.
ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ವಿಭಾಗದಲ್ಲಿ 2009–10ರಲ್ಲಿ ರಸ್ತೆ ಕಾಮಗಾರಿಯೊಂದು ನಡೆದಿದೆ. ಟೆಂಡರ್ ಫಾರಂ ಖರೀದಿಸದೇ ಇದ್ದ ಗುತ್ತಿಗೆದಾರರ (ರಾಜರಾಜೇಶ್ವರಿ ಕನ್ಸ್ಟ್ರಕ್ಷನ್) ಹೆಸರನ್ನು ಫಾರಂನಿಂದ ಹಿಡಿದು ಗುಣಮಟ್ಟ ಪರೀಕ್ಷೆವರೆಗೆ ಎಲ್ಲ ಕಡತಗಳಲ್ಲೂ ತಿದ್ದಿ ಸೇರಿಸಲಾಗಿದೆ. ತಾಂತ್ರಿಕ ದಾಖಲೆಗಳನ್ನು ಒದಗಿಸಲು ವಿಫಲವಾದರೂ ಅಧಿಕಾರಿಗಳು ಅಕ್ರಮವಾಗಿ ಆ ಸಂಸ್ಥೆಗೆ ಗುತ್ತಿಗೆ ವಹಿಸಿಕೊಟ್ಟಿದ್ದಾರೆ. ಲೆಕ್ಕ ಪರಿಶೀಲನಾ ವರದಿಯಿಂದ ಈ ಹಗರಣ ಬಯಲಾಗಿದೆ. ತಪ್ಪಿತಸ್ಥರ ವಿರುದ್ಧ ಇದುವರೆಗೆ ಕ್ರಮ ಜರುಗಿಸಿಲ್ಲ.
ಬಿಬಿಎಂಪಿ ವ್ಯವಹಾರಗಳ ಒಳ–ಹೊರಗುಗಳನ್ನು ಸಮಗ್ರವಾಗಿ ಬಲ್ಲ ಕೆಲವರನ್ನು ಮಾತನಾಡಿಸುತ್ತಾ ಹೊರಟರೆ ‘ಹಳೇ ಕಲ್ಲು, ಹೊಸ ಬಿಲ್ಲಿ’ನ ಕಥೆಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ರಸ್ತೆ, ಚರಂಡಿ, ಪಾದಚಾರಿ ಮಾರ್ಗಗಳು ಭ್ರಷ್ಟರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಗಳಾಗಿವೆ. ರಸ್ತೆಯ ಈ ತುದಿಯಿಂದ ಆ ತುದಿವರೆಗೆ ಒಂದು ‘ಜಾಬ್ ಕೋಡ್’ ಸಿಕ್ಕರೆ, ಅದೇ ರಸ್ತೆಯ ಆ ತುದಿಯಿಂದ ಈ ತುದಿಗೆ ಮತ್ತೊಂದು ‘ಜಾಬ್ ಕೋಡ್’ ಸೃಷ್ಟಿಯಾಗುತ್ತದೆ. ಕಪ್ಪು ಬಣ್ಣ ಬಳಿಯುತ್ತಾ ಹೋದರಾಯಿತು, ಕಾಮಗಾರಿ ಮುಗಿದಂತೆ. ಇಂತಹ ನಕಲಿ ಕಾಮಗಾರಿಗಳನ್ನು ತಪ್ಪಿಸಲು ‘ರಸ್ತೆ ಇತಿಹಾಸ’ ನಿರ್ವಹಣೆ ಮಾಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಇದೆ. ‘ಕೋಳಿ’ಯನ್ನು ಕೊಯ್ದು ‘ಚಿನ್ನದ ಮೊಟ್ಟೆ’ಗಳನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿಲ್ಲ.
2007–08ರ ಅವಧಿಯಲ್ಲಿ ಕೌನ್ಸಿಲ್ ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಾಗಿ ಆಗ ಬಿಬಿಎಂಪಿ ಆಡಳಿತದ ಹೊಣೆ ಹೊತ್ತವರು ಅಧಿಕಾರಿಗಳು. ಚುನಾವಣೆ ಘೋಷಣೆಗೆ ದಿನಗಣನೆ ನಡೆಯುತ್ತಿದ್ದಾಗ ಹಗಲು–ರಾತ್ರಿಯೆನ್ನದೆ ಟೆಂಡರ್ ಪರಿಶೀಲಿಸಿದ ಅಧಿಕಾರಿಗಳು ಸುಮಾರು ರೂ 3,500 ಕೋಟಿ ಮೊತ್ತದ ಕಾಮಗಾರಿಗಳನ್ನು ಗುತ್ತಿಗೆಗೆ ನೀಡಿದರು. ಅದರಲ್ಲಿ ರೂ 1,539 ಕೋಟಿ ಮೊತ್ತದ ಕಾಮಗಾರಿಗಳು ಎಲ್ಲಿ ನಡೆದಿವೆ ಎನ್ನುವುದು ಹುಡುಕಿದರೂ ಪತ್ತೆಯಾಗಲಿಲ್ಲ. ಈ ಹಗರಣದ ತನಿಖೆಗೆ ಬಿಎಂಟಿಎಫ್ ಮುಂದಾಗುತ್ತಿದ್ದಂತೆಯೇ ಅದರ ಕಚೇರಿಗೆ ಬೆಂಕಿ ಬಿದ್ದು, 153 ಕಡತಗಳೇ ನಾಪತ್ತೆಯಾದವು. ಆ ಅವ್ಯವಹಾರಗಳ ವಿಷಯವಾಗಿ ಸಿಐಡಿ ತನಿಖಾ ವರದಿ ಬರಬೇಕಿದೆ.
ರಾಜರಾಜೇಶ್ವರಿನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ಕ್ಷೇತ್ರಗಳ ಈ ಹಗರಣದಲ್ಲಿ ನೂರಾರು ಅಧಿಕಾರಿಗಳು ಭಾಗಿಯಾದ ಶಂಕೆ ಇದೆ. ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್ ಅವರು, ಹಿಂದಿದ್ದ ಒಬ್ಬ ಮುಖ್ಯ ಎಂಜಿನಿಯರ್ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ‘ಹಲವು ಕೋಟಿಗಳಿಗೆ ಬಾಳುವ 50ಕ್ಕೂ ಅಧಿಕ ಅಧಿಕಾರಿಗಳ ಪ್ರವರ ನನ್ನ ಬಳಿ ಇದೆ’ ಎಂದು ಅವರು ಹೇಳುತ್ತಾರೆ.
ಬಿಬಿಎಂಪಿ ಅರ್ಥ ವ್ಯವಸ್ಥೆಯ ಹಡಗನ್ನು ಮುನ್ನಡೆಸುವ ‘ಸಾಧನ’ ಆಗಬೇಕಿದ್ದ ಕಂದಾಯ ಇಲಾಖೆ, ಅದರ ಬದಲು ತೂತು ಕೊರೆಯುವ ಯಂತ್ರವಾಗಿದೆ. ಕಂದಾಯ ವಸೂಲಿಗಾರರು, ಸಂಗ್ರಹವಾದ ತೆರಿಗೆ ಮೊತ್ತವನ್ನು ಬಿಬಿಎಂಪಿ ಖಾತೆಗೆ ಜಮೆ ಮಾಡದೆ ವಂಚಿಸಿದ ಪ್ರಕರಣ ಹೇರೋಹಳ್ಳಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅದೊಂದು ಉದಾಹರಣೆ ಮಾತ್ರ. ‘ಹೆಗ್ಗಣ’ಗಳು ಪ್ರತಿ ವಾರ್ಡ್ ಕಚೇರಿಯಲ್ಲೂ ಇವೆ. ಬಿಬಿಎಂಪಿ ಹೆಸರಿನಲ್ಲಿ 530 ಖಾತೆಗಳಿದ್ದವು. ಎಲ್ಲಿ, ಏನು ವ್ಯವಹಾರ ನಡೆಯುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ ಎನ್ನುವ ಆತಂಕ ಎದುರಾಗಿತ್ತು. ಅವುಗಳ ಸಂಖ್ಯೆಯನ್ನು ಎರಡಕ್ಕೆ ಇಳಿಸಬೇಕು ಎಂಬ ನಿರ್ದೇಶನವನ್ನು ರಾಜ್ಯ ಸರ್ಕಾರ ಈ ಹಿಂದೆಯೇ ನೀಡಿತ್ತು. ‘ಬಿಬಿಎಂಪಿ ಹೆಸರಿನಲ್ಲಿ ಈಗ ಎಷ್ಟು ಬ್ಯಾಂಕ್ ಖಾತೆಗಳಿವೆ’ ಎಂದು ಕೇಳಿದರೆ, ಮಾಹಿತಿ ನೀಡಲು ಹೆಚ್ಚುವರಿ ಆಯುಕ್ತ (ಸಂಪನ್ಮೂಲ ಮತ್ತು ಹಣಕಾಸು) ಡಿ.ಕಿರಣ್ ನಿರಾಕರಿಸುತ್ತಾರೆ.
ಕೋಟಿಗಟ್ಟಲೆ ತೆರಿಗೆ ತರುವ ಸಾವಿರಾರು ಕಟ್ಟಡಗಳು ನಗರದಲ್ಲಿ ಇದ್ದರೂ ಕಂದಾಯ ಇಲಾಖೆಗೆ ಅತ್ತ ನೋಡಲು ಪುರುಸೊತ್ತು ಇಲ್ಲ. ಜಯನಗರದ ಶಾಪಿಂಗ್ ಸಂಕೀರ್ಣದ ಮಳಿಗೆದಾರರೊಬ್ಬರು ರೂ 1.13 ಕೋಟಿ ಬಾಕಿ ಉಳಿಸಿಕೊಂಡು ಹತ್ತು ವರ್ಷಗಳೇ ಆಗಿವೆ. ಶಾಸಕ ಬಿ.ಎನ್. ವಿಜಯಕುಮಾರ್ ಹಲವು ವರ್ಷಗಳಿಂದ ಬೆನ್ನುಬಿದ್ದಿದ್ದರೂ ಆ ಬಾಕಿಯನ್ನು ವಸೂಲಿ ಮಾಡಿಸುವಲ್ಲಿ ಇನ್ನೂ ಯಶಸ್ವಿ ಆಗಿಲ್ಲ. ಅಧಿಕಾರಿಗಳ ‘ಶಕ್ತಿ’ ಅಷ್ಟು ದೊಡ್ಡದಿದೆ.
ಈ ಮಧ್ಯೆ ಬಿಬಿಎಂಪಿ ಮಾರುಕಟ್ಟೆಗಳ ಸಂಖ್ಯೆ 147ರಿಂದ 127ಕ್ಕೆ ಇಳಿದಿದೆ. ಪ್ರಮುಖ ತಾಣಗಳಲ್ಲಿ 6,132 ಮಳಿಗೆಗಳನ್ನು ಹೊಂದಿದ್ದರೂ ರೂ 100, 200ರಂತೆ ಪುಡಿಗಾಸಿಗೆ ಅವುಗಳನ್ನು ಲೀಸ್ಗೆ ನೀಡಲಾಗಿದೆ. ಲೀಸ್ ಪಡೆದವರು ಮರು ಲೀಸ್ಗೆ ನೀಡಿ, ಬೆವರು ಸುರಿಸದೆ ಪ್ರತಿ ತಿಂಗಳು ಲಕ್ಷಾಂತರ ದುಡ್ಡು ಎಣಿಸುತ್ತಿದ್ದಾರೆ. ಮಾರುಕಟ್ಟೆ–ಮಳಿಗೆಗಳ ನಿರ್ವಹಣೆಗೆ ಸಾಲದಷ್ಟೂ ಬಾಡಿಗೆಯನ್ನು ಬಿಬಿಎಂಪಿ ಪಡೆಯುತ್ತಿದೆ. ವೆಚ್ಚದ ಮೇಲೆ ವಿಪರೀತ ಆಸಕ್ತಿ, ವರಮಾನ ಗಳಿಕೆ ಕಡೆಗೆ ಕೆಟ್ಟ ನಿರಾಸಕ್ತಿ – ಇದು ಕಂದಾಯ ಇಲಾಖೆಯ ಧೋರಣೆ ಆಗಿಬಿಟ್ಟಿದೆ. ಬಿಬಿಎಂಪಿಗೆ ಸೇರಿದ್ದ ಸಾವಿರಾರು ಕೋಟಿ ಬೆಲೆಬಾಳುವ 394 ಆಸ್ತಿಗಳನ್ನು 99 ವರ್ಷಗಳಷ್ಟು ಸುದೀರ್ಘ ಅವಧಿಗೆ ಗುತ್ತಿಗೆ ನೀಡಲಾಗಿದೆ. ಹಲವು ಆಸ್ತಿಗಳಿಂದ ಪ್ರತಿ ವರ್ಷ ಬರುತ್ತಿರುವ ಆದಾಯ ಎಷ್ಟು ಗೊತ್ತೆ? 50 ಪೈಸೆ, ರೂ 1, ರೂ 100! ಆ ಆಸ್ತಿಗಳನ್ನು ಗುತ್ತಿಗೆ ಪಡೆದವರು ಕೋಟ್ಯಂತರ ಆದಾಯ ಬಾಚುತ್ತಿದ್ದಾರೆ.
ಬಿಬಿಎಂಪಿಯಲ್ಲಿ ಮುಂದುವರಿದ ಕಾಮಗಾರಿಗಳ ಸಂಖ್ಯೆಯೇ 13,360ರಷ್ಟಿದೆ. ಇದರಲ್ಲಿ ಬಹುತೇಕ ಕಾಮಗಾರಿಗಳು ಎಂದಿಗೂ ಮುಗಿಯುವುದಿಲ್ಲ. ಏಕೆಂದರೆ, ಭೌತಿಕವಾಗಿ ಅಂತಹ ಕೆಲಸಗಳು ಅಸ್ತಿತ್ವದಲ್ಲೇ ಇರುವುದಿಲ್ಲ. ‘ಉಪಗ್ರಹದ ನೆರವಿನಿಂದ ಹುಡುಕಿಸಿದರೂ ಈ ಕಾಮಗಾರಿಗಳು ಸಿಗುವುದು ಕಷ್ಟ’ ಎಂದು ಹಿಂದಿನ ಆಯುಕ್ತ ಸಿದ್ದಯ್ಯ ಕೌನ್ಸಿಲ್ ಸಭೆಯಲ್ಲೇ ಹೇಳಿದ್ದರು. ಬಜೆಟ್ನಲ್ಲಿ ಮಾತ್ರ ಈ ಬಾಬ್ತಿಗೆ ಹಣ ವಿನಿಯೋಗ ಆಗುತ್ತಲೇ ಇರುತ್ತದೆ. ಅಂತಹ ರೂ 522 ಕೋಟಿ ಮೊತ್ತದ ಅನಗತ್ಯ ಕಾಮಗಾರಿಗಳಿಗೆ ಸಿದ್ದಯ್ಯ ತಡೆ ಒಡ್ಡಿದ್ದರು. ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ತಡೆಹಿಡಿದ ಕಾಮಗಾರಿಗಳಿಗೆ ಮರುಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.
ಧನದಾಹಿಗಳ ನಾಲಿಗೆಗೆ ಕಸದ ರುಚಿಯೂ ಹಿತವಾಗಿದೆ. ನಗರದಲ್ಲಿ ನಿತ್ಯ ಉತ್ಪಾದನೆಯಾಗುವುದು ಸುಮಾರು 1,800 ಟನ್ ಕಸ ಮಾತ್ರ. ಆದರೆ, ಬಿಬಿಎಂಪಿ ಲೆಕ್ಕದಲ್ಲಿ ಅದರ ಭಾರ ದ್ವಿಗುಣವಾಗಿದೆ. ಹೊರಹೋಗುವ ಕಸವನ್ನು ತೂಗುವಂತಹ ತೂಕದ ಸೇತುವೆಗಳನ್ನು ಹಾಕಲಾಗಿಲ್ಲ. ಕೊಟ್ಟಿದ್ದೇ ಲೆಕ್ಕ. ತ್ಯಾಜ್ಯ ನಿರ್ವಹಣೆಗಾಗಿ ದೆಹಲಿ ರೂ 137 ಕೋಟಿ, ಮುಂಬೈ ರೂ 191 ಕೋಟಿ, ಚೆನ್ನೈ ರೂ 119 ಕೋಟಿ ವಾರ್ಷಿಕ-ವಾಗಿ ವೆಚ್ಚ ಮಾಡಿದರೆ, ನಮ್ಮ ಬೆಂಗಳೂರಿಗೆ ರೂ 430 ಕೋಟಿ ಬೇಕು.
ಅರಣ್ಯ ಇಲಾಖೆ ವಾರ್ಷಿಕ 50 ಲಕ್ಷ ಸಸಿಗಳನ್ನು ನೆಡುತ್ತಿದೆಯಂತೆ. ಋತುಮಾನಕ್ಕೆ ತಕ್ಕಂತೆ ನಡೆಯಬೇಕಾದ ಕಾಮಗಾರಿಗಳನ್ನು ಆ ಇಲಾಖೆ ವರ್ಷದುದ್ದಕ್ಕೂ ನಡೆಸುತ್ತದೆ. ಪ್ರತಿಯೊಂದು ವ್ಯವಹಾರದಲ್ಲೂ ಅಕ್ರಮದ ಗಬ್ಬುನಾತ ಹೊಡೆಯುತ್ತದೆ. ‘ಮೋಸ ಮಾಡಿ ಜಾಹೀರಾತು ಫಲಕಗಳನ್ನು ಹಾಕಿದ್ದಾರೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಿಬಿಎಂಪಿಯೇ ಅದೇ ವ್ಯಕ್ತಿಗೆ ಹೊಸ ಜಾಹೀರಾತು ಫಲಕಗಳನ್ನು ಹಾಕಲು ಗುತ್ತಿಗೆ ನೀಡುತ್ತದೆ.
ಹಗರಣಗಳ ಎಲ್ಲ ನಡೆಗಳಲ್ಲಿ ಜನಪ್ರತಿನಿಧಿಗಳ ಪಾತ್ರ ನೆರಳಿನಂತಿದೆ. ಕಡತಗಳನ್ನು ಇಟ್ಟುಕೊಳ್ಳಲು ಯಾವುದೇ ಹಕ್ಕು ಇಲ್ಲದಿದ್ದರೂ ಹಲವು ಸದಸ್ಯರು ಅಕ್ರಮವಾಗಿ ಬಿಬಿಎಂಪಿ ಕಡತಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ನೆಟ್ಟಕಲ್ಲಪ್ಪ ವೃತ್ತದಲ್ಲಿ 1949ರಷ್ಟು ಹಿಂದೆಯೇ ನಿರ್ಮಿಸಲಾದ ಬಸ್ ತಂಗುದಾಣ ಇನ್ನೂ ಗಟ್ಟಿಮುಟ್ಟಾಗಿದೆ. ಅದರ ಅರ್ಧದಷ್ಟೂ ವಯಸ್ಸಾಗಿರದ ಬಿಬಿಎಂಪಿ ಸಭಾಂಗಣ ಕಟ್ಟಡ ಮಾತ್ರ ಮಳೆಯಾದರೆ ಸಣ್ಣದಾಗಿ ಸೋರಲು ಆರಂಭಿಸಿದೆ. ಆಗ ಡಿ.ವಿ. ಗುಂಡಪ್ಪ ಅವರಂತಹ ಮೇಧಾವಿಗಳು, ನಗರದ ಬಗ್ಗೆ ಅಪರಿಮಿತ ಕಳಕಳಿ, ಪ್ರೀತಿ ಉಳ್ಳವರು ನಗರಸಭೆ ಸದಸ್ಯರಾಗಿದ್ದರು. ಈಗ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.