ರೋಮ್ (ಐಎಎನ್ಎಸ್): ಇಲ್ಲಿನ ಗಿಗ್ಲಿಯೊ ದ್ವೀಪದ ಬಳಿ `ಕೋಸ್ಟಾ ಕಾನ್ಕಾರ್ಡಿಯಾ~ ಹಡಗು ದುರಂತಕ್ಕೀಡಾದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಬೇಕಾಗಿದ್ದ ಕ್ಯಾಪ್ಟನ್, ಎಲ್ಲರಿಗಿಂತ ಮೊದಲು ಜೀವರಕ್ಷಕ ದೋಣಿಯಲ್ಲಿ ತೆರಳಿದ್ದರು ಎಂಬ ವಿಷಯ ಇದೀಗ ದೃಢಪಟ್ಟಿದೆ.
ಬಂದರು ಅಧಿಕಾರಿಗಳು ಮತ್ತು ಕ್ಯಾಪ್ಟನ್ ನಡುವೆ ನಡೆದ ಸಂಭಾಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ದುರಂತ ಸಂಭವಿಸಿದ ಬಳಿಕ ನಡೆದ ಈ ಸಂಭಾಷಣೆಯ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ.
ಕ್ಯಾಪ್ಟನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
`ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ ಕೋರಿಕೆಯನ್ನು ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೊ ನಿರ್ಲಕ್ಷಿಸಿದ್ದರು. ನೀವು ಹಡಗಿಗೆ ಹಿಂತಿರುಗಿ ಎಷ್ಟು ಮಂದಿ ಪ್ರಯಾಣಿಕರು ಇದ್ದಾರೆ ಎಂಬ ಮಾಹಿತಿಯನ್ನು ಕೂಡಲೇ ನೀಡಲೇಬೇಕು. ಇದು ನಮ್ಮ ಆದೇಶ ಎಂದು ಹೇಳಿದ್ದರೂ ಅದಕ್ಕೆ ಅವರು ಕಿವಿಗೊಡಲಿಲ್ಲ~ ಎಂದು ಬಂದರು ಅಧಿಕಾರಿ ಡಿ ಫಾಲ್ಕೊ ದೂರಿದ್ದಾರೆ.