ಗ್ಲಿಗಿಯೊ, ಇಟಲಿ/ ನವದೆಹಲಿ (ಪಿಟಿಐ): ಇಟಲಿಯ ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ `ಕೊಸ್ಟಾ ಕಾನ್ಕಾರ್ಡಿಯಾ~ ಪ್ರಯಾಣಿಕರ ಹಡಗು ದುರಂತಕ್ಕೆ ಈಡಾದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡಿರುವ ಕರಾವಳಿಯ ರಕ್ಷಣಾ ಪಡೆಯವರು ಭಾನುವಾರ ಇಬ್ಬರು ಹಿರಿಯ ವ್ಯಕ್ತಿಗಳ ಶವಗಳನ್ನು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಮೂವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಹನಿಮೂನ್ಗಾಗಿ ತೆರಳುತ್ತಿದ್ದ ದಕ್ಷಿಣ ಕೊರಿಯಾದ ದಂಪತಿಯನ್ನು ಶನಿವಾರ ರಾತ್ರಿ ರಕ್ಷಿಸಲಾಗಿದೆ.
ವೈಭೋವೋಪೇತ ಹಡಗು ಅಪಘಾತಕ್ಕೆ ಈಡಾದ ಬಳಿಕ ಅದರಲ್ಲಿದ್ದ ಕನಿಷ್ಟ 130 ಮಂದಿ ಭಾರತೀಯರನ್ನು ರಕ್ಷಿಸಲಾಗಿದ್ದು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ. ಕೃಷ್ಣ ಅವರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಸತ್ತವರ ಪೈಕಿ ಭಾರತೀಯರು ಸೇರಿಲ್ಲ ಎನ್ನಲಾಗಿದೆ.
ಆರು ಮಂದಿ ಚಾಲನಾ ಸಿಬ್ಬಂದಿ ಮತ್ತು 11 ಪ್ರಯಾಣಿಕರು ಇನ್ನೂ ನಾಪತ್ತೆಯಾಗಿದ್ದಾರೆ. ಆದರೆ ಇವರಲ್ಲೂ ಭಾರತೀಯರು ಇಲ್ಲ ಎನ್ನಲಾಗಿದೆ.
ನಾಳೆ ವೇಳೆಗೆ ಅಪಘಾತ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಬೇಕು ಎಂದು ಕೃಷ್ಣ ಅವರು ಇಟಲಿಯಲ್ಲಿನ ಭಾರತೀಯ ರಾಯಭಾರಿಗೆ ಸೂಚಿಸಿದ್ದಾರೆ. ಕಾರ್ಯಾಚರಣೆಗೆ ನೆರವಾಗಲು ಈಗಾಗಲೇ ಇಬ್ಬರು ಭಾರತೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಸುಮಾರು 4,200ಕ್ಕಿಂತ ಹೆಚ್ಚು ಜನರನ್ನು ಸಾಗಿಸುತ್ತಿದ್ದ ಹಡಗು ಬಂಡೆಗೆ ಡಿಕ್ಕಿ ಹೊಡೆದಾಗ ಪ್ರಯಾಣಿಕರೆಲ್ಲ ಸೇರಿದ್ದ ರೆಸ್ಟೊರೆಂಟ್ನ ತುರ್ತು ಜಮಾವಣೆ ತಾಣದ ಬಳಿಯೇ ಶವಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
`ನಾವು ಇನ್ನೂ ಶೋಧ ಮುಂದುವರಿಸಿದ್ದೇವೆ~ ಎಂದಿದ್ದಾರೆ. ಈವರೆಗೆ ಒಟ್ಟು 5 ಶವಗಳು ದೊರೆತಿವೆ. ದುರಂತ ನಡೆದ ಸಂದರ್ಭದಲ್ಲೇ ಶುಕ್ರವಾರ ರಾತ್ರಿ ಮೂರು ಶವಗಳು ಪತ್ತೆಯಾಗಿದ್ದವು.