ನವದೆಹಲಿ: ಹೊಸ ಹಣಕಾಸು ಸಚಿವ ಪಿ.ಚಿದಂಬರಂ ಅವರ ನೇತೃತ್ವದಲ್ಲಿ ಭಾನುವಾರವೂ ಕಾರ್ಯ ನಿರ್ವಹಿಸಿದ ಹಣಕಾಸು ಸಚಿವಾಲಯವು, ಇಬ್ಬರು ಪ್ರಮುಖ ಅಧಿಕಾರಿಗಳ ಸ್ಥಾನವನ್ನು ಅದಲು ಬದಲು ಮಾಡಲು ನಿರ್ಧರಿಸಿದೆ.
ಕಂದಾಯ ಕಾರ್ಯದರ್ಶಿ ಆರ್.ಎಸ್.ಗುಜ್ರಾಲ್ ಮತ್ತು ಖರ್ಚುವೆಚ್ಚ ಕಾರ್ಯದರ್ಶಿ ಸುಮಿತ್ ಬೋಸ್ ಅವರಿಗೆ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಳ್ಳಲು ಸೂಚಿಸಿದೆ. ಸಚಿವಾಲಯದ ಅತ್ಯಂತ ಹಿರಿಯ ಅಧಿಕಾರಿಯಾದ ಗುಜ್ರಾಲ್ ಅವರ ಹಣಕಾಸು ಕಾರ್ಯದರ್ಶಿ ಸ್ಥಾನ ಅಬಾಧಿತವಾಗಿ ಮುಂದುವರಿಯಲಿದೆ.
ಚಿದುಗೆ ಸವಾಲು: ನಾಲ್ಕು ವರ್ಷಗಳ ನಂತರ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಚಿದಂಬರಂ, ಶನಿವಾರ ಮತ್ತು ಭಾನುವಾರವೂ ಕಚೇರಿಗೆ ಹಾಜರಾಗಿ ಕಾರ್ಯನಿರ್ವಹಿಸಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದ್ದು, ಅದನ್ನು ತಹಬಂದಿಗೆ ತರುವ ಸವಾಲು ಹಣಕಾಸು ಸಚಿವರಿಗೆ ಎದುರಾಗಿದೆ.
ಇದರೊಟ್ಟಿಗೆ ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಕುಂಠಿತ, ರಫ್ತು ಪ್ರಮಾಣ ತಗ್ಗಿರುವುದು, ವಿತ್ತೀಯ ಕೊರತೆ, ಹೂಡಿಕೆದಾರರಲ್ಲಿ ವಿಶ್ವಾಸ ಕುಸಿಯುತ್ತಿರುವ ಈ ಹೊತ್ತಿನಲ್ಲಿ, ಸಮಸ್ಯೆಗಳನ್ನು ನಿಭಾಯಿಸುವ ಜವಾಬ್ದಾರಿ ಚಿದಂಬರಂ ಮುಂದಿದೆ.ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳು ಭಾನುವಾರವೂ ಕರ್ತವ್ಯ ನಿರ್ವಹಿಸಿದರು.