ಬಸವಕಲ್ಯಾಣ: ಆಸೆ ತೊರೆದರೆ ಮನುಷ್ಯನು ಪೂರ್ಣಾನಂದನಾಗುತ್ತಾನೆ. ಆಸೆ ಬಿಡಲು ನಿತ್ಯ ದೇವರ ಸ್ತೋತ್ರ ಪಠಣ ಮಾಡುವುದು ಅವಶ್ಯ ಎಂದು ಯೆಡತೊರೆ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಸದ್ಗುರು ಸದಾನಂದ ಸ್ವಾಮಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಆನಂದ ಸಿಂಧು’ ಸ್ತೋತ್ರ ಪಠಣ ಅಭಿಯಾನದಲ್ಲಿ ಮಾತನಾಡಿದರು.
ಹಣದಿಂದಲೇ ಎಲ್ಲವೂ ದೊರಕುತ್ತದೆ ಎಂಬುದು ಭ್ರಮೆ. ಕೋಟಿ ಖರ್ಚು ಮಾಡಿದರೂ ನೆಮ್ಮದಿ ಸಿಗುವುದು ಅಸಾಧ್ಯ. ಇದಕ್ಕಾಗಿ ಆದಿ ಶಂಕರಾಚಾರ್ಯರು ಸರ್ವಕಾಲಿಕವಾದ ಕೆಲ ತತ್ವಗಳನ್ನು ಬೋಧಿಸಿದ್ದಾರೆ. ಅವುಗಳ ಪ್ರಸಾರಕ್ಕಾಗಿ ಕಳೆದ 12 ವರ್ಷಗಳಿಂದ ಅಭಿಯಾನ ನಡೆಸಲಾಗುತ್ತಿದೆ. ಇದೊಂದು ಜ್ಞಾನಯಜ್ಞವಾಗಿದೆ ಎಂದರು.
ಗುಲ್ಬರ್ಗದ ಸದಾಶಿವ ಮಹಾರಾಜ ಮಾತನಾಡಿ, ಭಕ್ತಿಯ ಫಲ ಭರವಸೆಯನ್ನು ಅವಲಂಬಿಸಿದೆ ಎಂದರು. ಹಿರಿಯ ಮುಖಂಡ ಎಂ.ಜಿ.ಮಹಾಜನ ಮಾತನಾಡಿ, ಸದ್ಗುರು ಸದಾನಂದ ಸ್ವಾಮಿ ಮಹಾರಾಜರು ಆನಂದ ಸಂಪ್ರದಾಯದವರು ಆಗಿದ್ದರು. ಅಧಾತ್ಮ ಸಾಧನೆಯಿಂದ ದಿವ್ಯ ಶಕ್ತಿ ಪಡೆದುಕೊಂಡಿದ್ದರು ಎಂದರು.
ಸದಾನಂದ ಮಠದ ಪ್ರಮುಖ ಕೇಶವಾನಂದ ಮಹಾರಾಜ, ಬ್ರಾಹ್ಮಣ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಕಮಲಾಕರ ದೀಕ್ಷಿತ, ಭಾವಸಾರ ಕ್ಷತ್ರೀಯ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟ ಗುರ್ಜರ, ಪ್ರಮುಖರಾದ ವಿಜಯಕುಮಾರ ಜೋಶಿ ಮೋರಖಂಡಿ, ಕೆ.ಕೆ.ದೇಶಪಾಂಡೆ, ವೆಂಕಟರಾವ ಕುಲಕರ್ಣಿ, ಜೀತೇಂದ್ರ ಪಾಠಕ, ಕಿಶೋರ ಕುಲಕರ್ಣಿ ಇದ್ದರು. ಮಯೂರಿ ಪಾಠಕ ಸ್ವಾಗತಿಸಿದರು. ಕೇದಾರ ದೀಕ್ಷಿತ ನಿರೂಪಿಸಿದರು.