ಚಿಕ್ಕೋಡಿ: ತಾಲ್ಲೂಕಿನ ನಾಗರಾಳದಿಂದ ನೇಜ ಗ್ರಾಮದವರೆಗಿನ ಆರು ಕಿ.ಮೀ ಅಂತರದ ರಸ್ತೆ ತೀರಾ ಹದಗೆಟ್ಟಿದ್ದು, ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ರೋಸಿ ಹೋಗಿದ್ದಾರೆ.ತಾಲ್ಲೂಕಿನ ಚಿಕ್ಕೋಡಿ-ಯಕ್ಸಂಬಾ ಮತ್ತು ಚಿಂಚಣಿ-ಬೋರಗಾಂವ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ನಾಗರಾಳ ಗ್ರಾಮದಿಂದ ನೇಜವರೆಗಿನ ಗ್ರಾಮೀಣ ರಸ್ತೆಯ ಸ್ಥಿತಿ ಅಧೋಗತಿಗೆ ತಲುಪಿದೆ.
ರಸ್ತೆಯ ತುಂಬ ಮಾರುದ್ದ ತಗ್ಗುಗಳು ನಿರ್ಮಾಣಗೊಂಡಿವೆ. ಡಾಂಬರು ಕಿತ್ತು ಹೋಗಿ ವರ್ಷಗಳೇ ಕಳೆದಿದ್ದು, ಮಳೆಗಾಲದಲ್ಲಿ ರಸ್ತೆಯ ತುಂಬ ಬಿದ್ದಿರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ದ್ವಿಚಕ್ರವಾಹನ ಚಾಲನೆಯಂತೂ ಸವಾಲೇ ಸರಿ.
ಸುಮಾರು ಆರು ಕಿ.ಮೀ ರಸ್ತೆಯನ್ನು ದ್ವಿಚಕ್ರವಾಹನದ ಮೂಲಕ ಕ್ರಮಿಸಿಬೇಕಾದರೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತಿದೆ. ಹೆಂಡತಿ-ಮಕ್ಕಳನ್ನು ದ್ವಿಚಕ್ರವಾಹನ ದಲ್ಲಿ ಕುಳ್ಳರಿಸಿಕೊಂಡು ವಾಹನ ಚಲಾಯಿಸುವುದಂತೂ ಕಷ್ಟಕರವಾಗಿದೆ.
ಕೊಂಚ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ, ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ನಿತ್ಯವೂ ಚಿಕ್ಕೋಡಿ, ಬೇಡಕಿಹಾಳ, ಸದಲಗಾ ಮುಂತಾದ ಕಡೆಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗುವ ಈ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ.
ಹದಗೆಟ್ಟ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸುವುದರಿಂದ ವೇಳೆಗೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.ಸರಕಾರ ರಸ್ತೆಗಳ ಸುಧಾರಣೆಗಾಗಿಯೇ ಕೋಟ್ಯಾಂತರ ರೂ. ಹಣ ಖರ್ಚು ಮಾಡುತ್ತದೆ. ಆದರೆ, ಹಲವು ವರ್ಷಗಳಿಂದ ಹದಗೆಟ್ಟ ಈ ರಸ್ತೆ ಸುಧಾರಣೆಯತ್ತ ಮಾತ್ರ ಯಾಕೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.