ಸಿಂಧನೂರು: ನಗರದ ಕೋರ್ಟ್ ರಸ್ತೆಯಲ್ಲಿ ದಿನವೂ ಓಡಾಡುವ ಜನ ಅಕ್ಷರಶಃ ಜಿಗುಪ್ಸೆಗೊಂಡಿದ್ದಾರೆ. ಕಾರಣ ಈ ರಸ್ತೆಯ ದುರಾವಸ್ಥೆ. ಸಾಮಾನ್ಯ ದಿನಗಳಲ್ಲೇ ನಡೆದಾಡಲು ಕಷ್ಟವಾಗಿರುವ ಈ ರಸ್ತೆ ಮಳೆಗಾಲದಲ್ಲಿ ತಾಳುವ ಅವಸ್ಥೆ ನಿಜಕ್ಕೂ ರೇಜಿಗೆ ತರಿಸುತ್ತದೆ.
ಒಂದುವಾರದಿಂದ ಬಿಟ್ಟುಬಿಡದೆ ಮಳೆಯಾಗುತ್ತಿರುವುದರಿಂದ ನಗರದ ಬಹುತೇಕ ಒಳರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ. ಆದರೆ ಮಹೆಬೂಬ ಕಾಲೊನಿ, ಸುಟ್ಟ ಏರಿಯಾ ಸೇರಿದಂತೆ ನಾಲ್ಕು ವಾರ್ಡ್ಗಳಿಗೆ ಸಂಪರ್ಕ ಕಲ್ಪಿಸುವ ಕೋರ್ಟ್ ಪಕ್ಕದ ರಸ್ತೆ ಉಳಿದೆಲ್ಲ ರಸ್ತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಬ್ಬೆದ್ದಿದೆ.
ರಸ್ತೆ ನಡುವೆ ಮೊಣಕಾಲು ಮಟ್ಟದ ದೊಡ್ಡ-ದೊಡ್ಡ ತಗ್ಗುಗಳು ಬಿದ್ದಿದ್ದು ಮಳೆ ಮತ್ತು ಚರಂಡಿ ನೀರು ನಿಂತು ಕಾಲಿಡಲು ಸಹ ಜಾಗವಿಲ್ಲದ ಮಟ್ಟಿಗೆ ಹಾಳಾಗಿದೆ. ಆರ್ಜಿಎಂ ಶಾಲೆ, ಜ್ಞಾನಜ್ಯೋತಿ ವಿಜ್ಞಾನ ಕಾಲೇಜು, ಆದಿತ್ಯ ಪದವಿಪೂರ್ವ ಕಾಲೇಜು, ಗಿರಿಜಾ ಮಹಿಳಾ ಕಾಲೇಜಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ವಿದ್ಯಾರ್ಥಿಗಳು ಕೆಸರು ಮೆತ್ತಿಸಿಕೊಂಡೆ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ರಸ್ತೆ ಬದಲಿಸಬೇಕಾದರೆ ನಗರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಸುತ್ತುವರಿದು ಹೋಗಬೇಕಾಗಿದೆ. ಬರಿಗಾಲಲಿ ನಡೆಯುವುದಂತೂ ಅಸಾಧ್ಯದ ಮಾತು.
ಎಚ್ಚೆತ್ತುಕೊಳ್ಳದ ನಗರಸಭೆ: ಮಳೆ ನಿಂತು 15 ದಿನಗಳಾದರೂ ಬದಲಾಗದ ಈ ರಸ್ತೆಯ ದುಸ್ಥಿತಿಯ ಬಗ್ಗೆ ತೀವ್ರ ಬೇಸರ ಮತ್ತು ಅಸಹಾಯಕತೆಯನ್ನು ಒಟ್ಟೊಟ್ಟಿಗೆ ವ್ಯಕ್ತಪಡಿಸುವ ಸಾರ್ವಜನಿಕರ ವ್ಯಥೆಯ ಬಗ್ಗೆ ನಗರಸಭೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಕಾರಣ ನಗರಸಭೆಯವರು ಈಗಲಾದರೂ ಎಚ್ಚೆತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಕಾಲೇಜು ವಿದ್ಯಾರ್ಥಿಗಳಾದ ಮಲ್ಲಿಕಾ ಚಳ್ಳೂರು, ಉಮೇಶ, ಶಾರದಾ, ಆಸಿಫಾ ಸುಲ್ತಾನ, ಬಸವರಾಜ ಪಿ., ನಾಗರಾಜ, ಮಂಜುನಾಥಗೌಡ ಮತ್ತಿತರರು ಆಗ್ರಹಿಸಿದ್ದಾರೆ.