ಚನ್ನಪಟ್ಟಣ: ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ತಾಲ್ಲೂಕಿನ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಭಕ್ತ ಸಾಗರದ ನಡುವೆ ವೈಭವದಿಂದ ನೆರವೇರಿದವು.
ಬೆಳಿಗ್ಗೆಯಿಂದಲೇ ಮಹಿಳೆಯರು ಶಿವ ದೇವಾಲಯಗಳಿಗೆ ತೆರಳಿ ಸರದಿಯಲ್ಲಿ ನಿಂತು ವಿಶೇಷ ಪೂಜೆ ನೆರವೇರಿಸಿ ಕೃತಾರ್ಥರಾದರು. ಪಟ್ಟಣದ ಕೋಟೆಯ ಕಾಶಿ ವಿಶ್ವೇಶ್ವರ, ಎಂ.ಜಿ. ರಸ್ತೆಯ ಈಶ್ವರ, ಹೊರವಲಯದ ಮಹದೇಶ್ವರ, ಮಳೂರಿನ ಅರ್ಕೇಶ್ವರ ಸ್ವಾಮಿ, ಕೋಡಂಬಹಳ್ಳಿ ಮರಳೇಶ್ವರ ಸ್ವಾಮಿ, ಹೊಂಗನೂರಿನ ಶಿವ ದೇವಸ್ಥಾನ, ಬೊಮ್ಮನಾಯಕನಹಳ್ಳಿ ಶಿವ ದೇವಸ್ಥಾನ, ಅಬ್ಬೂರುದೊಡ್ಡಿ ಬೀರೇಶ್ವರಸ್ವಾಮಿ, ರಾಂಪುರದ ಮಲವೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು.
ಕೆಂಗಲ್ ಬಳಿಯ ಚಂದ್ರಗಿರಿ ದೊಡ್ಡಿ ಯೋಗಿ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರಗ ಮಹೋತ್ಸವ, ಕೋಟೆ ಮಂಟೇಸ್ವಾಮಿ ದೇವಸ್ಥಾನ ಸೇವಾ ಸಮಿತಿಯಿಂದ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳು ನೆರವೇರಿದವು. ಕೆಲವು ದೇವಸ್ಥಾನಗಳಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.