ಬೆಂಗಳೂರು: `ಕವಿತೆಗಳು ಒಂದೇ ಓದಿಗೆ ದಕ್ಕಬಾರದು. ಸಿದ್ದರಾಮಯ್ಯ ಅವರ ಕವಿತೆಗಳು ಮತ್ತೆ ಮತ್ತೆ ಓದಿಯೇ ದಕ್ಕಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ~ ಎಂದು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.
ಕರೆಬಳಗವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ `ಕಾಲ ಕಣ್ಣಿಯ ಹಂಗು~ ಈವರೆಗಿನ ಕವಿತೆಗಳ ಸಂಪುಟವನ್ನು ಬಿಡುಗಡೆ ಮಾಡಿ ಮಾತನಾಡಿದರು.
`ನೆಲದ ಸಂಸ್ಕೃತಿ, ನೆನಪು ಮತ್ತು ಕನಸುಗಳನ್ನು ಒಟ್ಟಿಗೆ ಒಂದು ಭಾಷೆಯಲ್ಲಿ ಕಟ್ಟಿಕೊಡುವ ಮೂಲಕ ವಿಭಿನ್ನ ಕಾವ್ಯ ಪ್ರಕಾರವನ್ನು ಅಳವಡಿಸಿಕೊಂಡಿದ್ದಾರೆ. ಇವರ ಕವಿತೆಗಳಲ್ಲಿ ಸಂಚಾರಿ ಭಾವವಿದ್ದರೂ, ಮೂಲದಲ್ಲಿ ಒಂದು ಸ್ಥಾಯಿ ಭಾವವನ್ನು ಉಳಿಸಿಕೊಂಡಿದೆ~ ಎಂದು ಹೇಳಿದರು.
`ಕವಿತೆಗಳು ಕಾಲದೊಂದಿಗಿನ ಸಂವಾದದ ಜತೆಯಲ್ಲಿಯೇ ಕವಿಯ ಜೀವನದರ್ಶನ ಮತ್ತು ಕಲಾದರ್ಶನಕ್ಕೆ ಆಸ್ಪದ ನೀಡುತ್ತದೆ. ಜಾಗತೀಕರಣ ಮತ್ತು ಉದಾರಿಕರಣದ ಹಿನ್ನೆಲೆಯಲ್ಲಿಯೂ ಈ ಕವಿತೆಗಳು ಹಲವು ಹೊಳಹುಗಳನ್ನು ನೀಡುತ್ತದೆ~ ಎಂದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯಕುಮಾರ್ ಸಿಂಹ, `ಕವಿತೆಯ ರಚನೆಯ ಕೇವಲ ವ್ಯಕ್ತಿಯಲ್ಲಿ ಆನಂದ ಉಂಟುಮಾಡುವುದಲ್ಲದೆ, ವಿವೇಕ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕವಿತೆಗಳು ಪ್ರಮುಖವಾಗಿದೆ~ ಎಂದು ಹೇಳಿದರು.
`ಗೂಡಾನ್ವೇಷಣೆ ಮತ್ತು ಮಾನವೀಯ ಮೌಲ್ಯಗಳ ಸತ್ವವನ್ನು ಸಾಹಿತ್ಯ ಮಾತ್ರ ಸ್ಪಷ್ಟವಾಗಿ ತಿಳಿಸಬಲ್ಲದು. ಕಾವ್ಯ, ನಾಟಕ, ಕಾದಂಬರಿ ಹೀಗೆ ವಿವಿಧ ಪ್ರಕಾರಗಳು ವ್ಯಕ್ತಿತ್ವ ವಿಕಸನಂದಂತಹ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ~ ಎಂದು ಹೇಳಿದರು.
ಸಮುದಾಯ ತಂಡವು ಇದೇ ಸಂದರ್ಭದಲ್ಲಿ ಕವಿತೆಯ ರಂಗರೂಪ ಪ್ರಸ್ತುತ ಪಡಿಸಿತು. ಲೇಖಕಿ ದು.ಸರಸ್ವತಿ, ಕಣ್ವ ಪ್ರಕಾಶನದ ಎಂ.ಆರ್.ಗಿರಿರಾಜು ಉಪಸ್ಥಿತರಿದ್ದರು.