ಹೈದರಾಬಾದ್ (ಪಿಟಿಐ): ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರ ಗುಂಪು ನಡೆಸಿದ ದಾಳಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ (ಎಫ್ಆರ್ಒ) ಮೃತಪಟ್ಟು, ಇತರೆ ಏಳು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಡಿಚ್ಚಪಲ್ಲಿಯ ಎಫ್ಆರ್ಒ ಗಂಗಯ್ಯ (42) ಗ್ರಾಮಸ್ಥರ ಹಲ್ಲೆಯಿಂದ ಮೃತಪಟ್ಟ ಅಧಿಕಾರಿ.
‘ಇಲ್ಲಿನ ಧರಪಲ್ಲಿ ಮಂಡಲ ವ್ಯಾಪ್ತಿಯ ನಲ್ಲವೆಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ, ಗಂಗಯ್ಯ ಮತ್ತು ಇತರೆ ಏಳು ಸಿಬ್ಬಂದಿ ಸ್ಥಳಕ್ಕೆ ಭಾನುವಾರ ಮಧ್ಯ ರಾತ್ರಿ ಸ್ಥಳಕ್ಕೆ ತೆರಳಿದ್ದರು’ ಎಂದು ನಿಜಾಮಾಬಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಮೋಹನ್ ರಾವ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಈ ವೇಳೆ ಗ್ರಾಮಸ್ಥರ ಗುಂಪು ಅಧಿಕಾರಿಗಳ ಮೇಲೆ ದೊಣ್ಣೆ ಮತ್ತು ಕೊಡಲಿಯಿಂದ ಹಲ್ಲೆ ನಡೆಸಿತು. ಘಟನೆಯಲ್ಲಿ ಎಫ್ಆರ್ಒ ಗಂಗಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಏಳು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.