ಪಾಂಡವಪುರ: ಬರಗಾಲದಿಂದ ತತ್ತರಿಸಿ ಹೋಗಿರುವ ಹಳ್ಳಿಗಳ ನಿರುದ್ಯೋಗಿಗಳು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದು, ಇದನ್ನು ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಮೇಲುಕೋಟೆ ಹೋಬಳಿ ಬಳಿಘಟ್ಟ ಗ್ರಾಮದಲ್ಲಿ ಈಚೆಗೆ ನಡೆದ ರಾಜಕೀಯ ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಳೆಯಾಶ್ರಿತ ಪ್ರದೇಶಗಳಲ್ಲಿ ಈ ಬಾರಿ ಉತ್ತಮ ಮಳೆಯಾಗದ ಕಾರಣ ಕೃಷಿ ನೆಲಕಚ್ಚಿದೆ. ಇದರಿಂದಾಗಿ ರೈತಾಪಿ ಜನರು ತೀವ್ರ ಕಷ್ಟದಲ್ಲಿ ಸಿಲುಕಿ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ಹಳ್ಳಿಗಳ ಬಹುಪಾಲು ಯುವಕರು ನಗರಗಳ ಹೋಟೆಲ್ಗಳಲ್ಲಿ, ಅಂಗಡಿಗಳಲ್ಲಿ ಇನ್ನಿತರ ಕಡೆ ದುಡಿಯುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಮುಂದಾಗಬೇಕಾಗಿದೆ. ಹಳ್ಳಿಗಳಲ್ಲಿಯೇ ಉದ್ಯೋಗ ಸೃಷ್ಟಿ ಮಾಡುವ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ದೇಶದಲ್ಲಿ ಸುಮಾರು 7 ಲಕ್ಷ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಶೇ 85ರಷ್ಟು ರೈತರು ಮಳೆಯಾಶ್ರಿತ ಪ್ರದೇಶದವರಾಗಿದ್ದಾರೆ. ಹಾಗಾಗಿ ಮಳೆಯಾಶ್ರಿತ ಪ್ರದೇಶದ ರೈತರ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕಾಗಿದೆ ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟರಾಜು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಕೆ.ಗೌಡೇಗೌಡ, ಎಂ.ಕೆ.ಪುಟ್ಟೇಗೌಡ, ಕೆಜೆಪಿ ಯುವ ಘಟಕದ ಅಧ್ಯಕ್ಷ ಅನಿಲ್ಕುಮಾರ್, ಮುಖಂಡ ಬಳಿಘಟ್ಟ ಕೃಷ್ಣೇಗೌಡ, ಜಯಬೋರೇಗೌಡ ಇತರರು ಇದ್ದರು.