ಮಕ್ಕಳು ಏನು ಮಾಡಿದರೂ ಚೆಂದ. ಅದರಲ್ಲೂ ಅವರ ಕೈಗೆ ಸುಲಭದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಪ್ರತಿನಿತ್ಯ ತಾವು ನೋಡುವ ವಿಜ್ಞಾನದ ವಸ್ತುಗಳನ್ನು ರಚಿಸಿದರಂತೂ ಅವರಿಗೆ ಇನ್ನೂ ಆನಂದ.
ಟೆಲಿಸ್ಕೋಪ್ನಿಂದ ಏನು ಉಪಯೋಗ? ಪರಿಸರ ಕಾಳಜಿ ಹೇಗೆ? ಭಾರತೀಯ ಸೈನ್ಯದ ಜೆಟ್ ವಿಮಾನಗಳು ಹಾಗೂ ಟ್ಯಾಂಕ್ಗಳು ಹೇಗಿರುತ್ತವೆ ಎನ್ನುವ ಹಾಗೂ ಇನ್ನಿತರ ವೈಜ್ಞಾನಿಕ ಸಂಗತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ಒಂದೆಡೆ ವಿದ್ಯಾರ್ಥಿಗಳು ವಿವರಿಸುತ್ತಿದ್ದರು.
ಬನಶಂಕರಿಯ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ‘ದಿ ಅಮೆಚ್ಯೂರ್ ಸೈಂಟಿಸ್ಟ್’ ಎಂಬ ವಿಜ್ಞಾನೋತ್ಸವದಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಮಾದರಿಗಳು ಗಮನಸೆಳೆದವು.
ಭಾರತದ ವಿವಿಧ ಭಾಗಗಳಿಂದ ಬಂದ ೮ರಿಂದ ೧೨ನೇ ತರಗತಿಯ 102 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜ್ಞಾನೋತ್ಸವಕ್ಕೆ ಸುಮಾರು ಎರಡು ಸಾವಿರ ಮಂದಿ ಸಾಕ್ಷಿಯಾದರು.
ಕಳೆದ ಎರಡು ವರ್ಷಗಳಿಂದ ಅಮೆಚ್ಯೂರ್ ಸೈಂಟಿಸ್ಟ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಾಗಾರ ಹಾಗೂ ಕಣ್ಮನ ಸೆಳೆಯುವ ವೈಮಾನಿಕ ಪ್ರದರ್ಶನ ಕೂಡ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
‘ಹೊಸ ಪ್ರಯೋಗಗಳು ಪ್ರಾಥಮಿಕ ಹಂತದಿಂದ ಸಂಶೋಧನೆಯ ಹಂತದವರೆಗಿನ ಪ್ರತಿಯೊಂದು ಘಟ್ಟಗಳನ್ನು ವೈಯಕ್ತಿಕ ಆಸಕ್ತಿಯಿಂದ ಕಲಿಯಬೇಕು. ಅದು ಶಿಕ್ಷಣದ ಜತೆಯಲ್ಲೇ ಆಗಬೇಕಾಗಿರುವುದು ಅನಿವಾರ್ಯ’ ಎಂದು ಪಿಇಎಸ್ ಕಾಲೇಜಿನ ಸಂಸ್ಥಾಪಕ ಡಾ. ಎಂ.ಆರ್. ದೊರೆಸ್ವಾಮಿ ಸಲಹೆ ನೀಡಿದರು.
ಮೈಸೂರಿನ ವಿದ್ಯಾಶ್ರಮದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಮೋಡದಿಂದ ವಿದ್ಯುತ್ ಉತ್ಪಾದಿಸಬಹುದಾದ ಯೋಜನೆಯ ಮಾದರಿ, ಪರಿಸರ ಸ್ನೇಹಿ ಎಂಜಿನ್, ಪಂಜಾಬಿನ ಡೆಲ್ಲಿ ಪಬ್ಲಿಕ್ ಸ್ಕೂಲ್ನ ಮಕ್ಕಳು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆಯ ಮಾದರಿ ಮೆಚ್ಚುಗೆಗೆ ಪಾತ್ರವಾದವು.
ಭೌತಶಾಸ್ತ್ರ, ರಾಕೆಟ್ ವಿಜ್ಞಾನ ಮಾತ್ರವಲ್ಲದೆ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಾಜೆಕ್ಟ್ಗಳು ಗಮನ ಸೆಳೆದವು. ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ‘ಎಕ್ಸಾಸ್’ (ಔರಾ) ಜೀವಶಾಸ್ತ್ರ ವಿಭಾಗದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.