ಬೆಂಗಳೂರು: ‘ಇಂಧನ ಅಭಾವ ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯುತ್ ಉಳಿತಾಯಕ್ಕೆ ಪೂರಕವಾದ ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಜನತೆ ಮುಂದಾಗಬೇಕಿದೆ’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ತಿಳಿಸಿದರು. ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್ಮೆಂಟ್, ಕೇಂದ್ರ ಸರ್ಕಾರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಹಾಗೂ ಇಂಟಿಗ್ರೇಟೆಡ್ ಗ್ರೀನ್ ವೆಂಚರ್ಸ್ ಸಂಯುಕ್ತವಾಗಿ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಾರತ ರಾಷ್ಟ್ರೀಯ ಹಸಿರು ಕಟ್ಟಡಗಳ ಮಾನದಂಡ ವ್ಯವಸ್ಥೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಎರಡು ರೀತಿಯಲ್ಲಿ ಹಸಿರು ಕಟ್ಟಡಗಳನ್ನು ರೂಪಿಸುವುದು ಸಾಧ್ಯವಿದ್ದು ಸಿಎಫ್ಎಲ್, ಎಲ್ಇಡಿ ಬಲ್ಬ್ಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಅಲ್ಲದೇ ವಿದ್ಯುತ್ ಬಳಕೆಯನ್ನೇ ಕಡಿಮೆಗೊಳಿಸುವ ಹೊಸ ಬಗೆಯ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸುವುದು ಕೂಡ ಈ ಪರಿಕಲ್ಪನೆಯ ಭಾಗವಾಗಿದೆ’ ಎಂದು ಹೇಳಿದರು. ‘ರಾಷ್ಟ್ರಪತಿ ಭವನ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಲವು ಕಟ್ಟಡಗಳಲ್ಲಿ ಈಗಾಗಲೇ ಹಸಿರು ಕಟ್ಟಡ ಕಲ್ಪನೆಯನ್ನು ರೂಪಿಸಲಾಗಿದೆ.
ರಾಜ್ಯದಲ್ಲಿ ಸರ್ಕಾರಿ ಕಟ್ಟಡಗಳು, ದೊಡ್ಡ ಪ್ರಮಾಣದ ಹೋಟೆಲ್ಗಳು ಈ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಹೊಸದಾಗಿ ರೂಪುಗೊಳ್ಳುತ್ತಿರುವ ಮನೆಗಳು ಇಡೀ ಕಟ್ಟಡವನ್ನೇ ಹಸಿರು ಕಟ್ಟಡವನ್ನಾಗಿ ರೂಪಿಸಬೇಕಿದೆ’ ಎಂದರು. ಮುಖ್ಯಮಂತ್ರಿಯವರ ಸಲಹೆಗಾರ ಡಾ. ಎ.ರವೀಂದ್ರ ಮಾತನಾಡಿ ‘ಹಸಿರು ಕಟ್ಟಡಗಳನ್ನು ಉತ್ತೇಜಿಸುವ ಉದ್ದೇಶದಿಂದ ತಾರಾ ಹೋಟೆಲ್ಗಳಂತೆ ಸ್ಟಾರ್ ರೇಟಿಂಗ್ ಒದಗಿಸಲಾಗುವುದು. ಅವುಗಳಲ್ಲಿರುವ ಹಸಿರು ಕಟ್ಟಡಗಳ ಸೌಲಭ್ಯಗಳನ್ನು ಆಧರಿಸಿ ಪಂಚತಾರಾ, ತ್ರಿತಾರಾ ಹೀಗೆ ಗ್ರೇಡ್ಗಳನ್ನು ನೀಡಲಾಗುವುದು’ ಎಂದು ಹೇಳಿದರು.
‘ಹಸಿರು ಕಟ್ಟಡಗಳಲ್ಲಿ ವಿದ್ಯುತ್ ಮಾತ್ರವಲ್ಲದೇ ನೀರು, ಘನತ್ಯಾಜ್ಯ ನಿರ್ವಹಣೆಗೆ ಕೂಡ ಗಮನ ಹರಿಸಬೇಕಿದೆ. ಆಗ ಪರಿಪೂರ್ಣವಾದ ಹಸಿರು ಕಟ್ಟಡ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಆದರ್ಶ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವ ಕೃಷ್ಣನ್, ಎಂಎನ್ಆರ್ಇ ನಿರ್ದೇಶಕ ಡಾ. ಎ.ಕೆ. ತ್ರಿಪಾಠಿ ಮತ್ತಿತರರು ಉಪ್ಥತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.