ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ಹಾಗೂ ಬೆಂಗಳೂರಿನ ರೈಲ್ವೆ ಗಾಲಿ ಕಾರ್ಖಾನೆ (ಆರ್.ಡಬ್ಲ್ಯು.ಎಫ್) ತಂಡದವರು ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ತಂಡ 2-0 ಗೋಲುಗಳಿಂದ ಡಿ.ವೈ.ಎಸ್.ಎಸ್. ತಂಡವನ್ನು ಮಣಿಸಿತು.
ಉತ್ತಮ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ವಿರಾಮದ ವೇಳೆಗೆ 1-0 ಗೋಲಿನಿಂದ ಮುಂದಿದ್ದ ವಿಜಯಿ ತಂಡದ ಗಣಪತಿ ಹಾಗೂ ತಿಮ್ಮಣ್ಣ ಗೋಲು ತಂದಿತ್ತರು.
ಇದೇ ಟೂರ್ನಿ ಇನ್ನೊಂದು ಪಂದ್ಯದಲ್ಲಿ ರೈಲ್ವೆ ಗಾಲಿ ಕಾರ್ಖಾನೆ ತಂಡದವರು 3-1 ಗೋಲುಗಳಿಂದ ಆರ್.ಬಿ.ಐ. ತಂಡದ ಮೇಲೆ ಅರ್ಹ ಜಯ ಸಾಧಿಸಿದರು. ವಿಜಯಿ ತಂಡದ ರವಿಕುಮಾರ್, ಗಿರೀಶ್ ಗಣಪತಿ, ಪೂಣಚ್ಚ ಗೋಲು ತಂದಿತ್ತರು.
ನಾಳೆ (ಗುರುವಾರ) ಮಧ್ಯಾಹ್ನ 4-00ಕ್ಕೆ ಬೆಂಗಳೂರಿನ ಎಚ್.ಎ.ಎಲ್-ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ನಡುವೆ ಪಂದ್ಯ ನಡೆಯಲಿದೆ.