ಹಾನಗಲ್: `ಹಾನಗಲ್ಲಿನಿಂದ ಮುಂಡಗೋಡ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಪಾಳಾ ರಸ್ತೆಯನ್ನು ರೂ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದೇ ಭಾಗದ ಕೊಪ್ಪರಸಿಕೊಪ್ಪ-ಗುಡಗುಡಿ ರಸ್ತೆಯನ್ನು ರೂ 1 ಕೋಟಿ ವೆಚ್ಚದಲ್ಲಿ ಸುಧಾರಿಸುವ ಕಾಮಗಾರಿ ಚಾಲನೆ ನೀಡಲಾಗುವುದು' ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ತಾಲ್ಲೂಕಿನ ಗಾಜಿಪೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸರ್ವಋತು ರಸ್ತೆ, ಶಾಲಾ ಕೊಠಡಿ, ಸಮರ್ಪಕ ವಿದ್ಯುತ್, ಕುಡಿಯುವ ನೀರು ಮತ್ತು ನೀರಾವರಿಗೆ ಆದ್ಯತೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.
ತಾ.ಪಂ. ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, `ಗ್ರಾಮಗಳ ಜೀವನ ಮಟ್ಟ ಸುಧಾರಿಸುವ ಮಹತ್ವಾಕಾಂಕ್ಷೆ `ಸುವರ್ಣ ಗ್ರಾಮ' ಯೋಜನೆಯಡಿಯಲ್ಲಿ ಕೊಪ್ಪರಸಿಕ್ಪೊಪ ಗ್ರಾಮ ಒಳಪಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ' ಎಂದರು.
ಗ್ರಾ.ಪಂ. ಅಧ್ಯಕ್ಷ ಶಿವಾಜಿ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಪದ್ಮನಾಭ ಕುಂದಾಪುರ, ಮುಖಂಡ ಶಂಕರಗೌಡ್ರ ಪಾಟೀಲ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷೆ ಅನಿತಾ ಶಿವೂರ, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಓಲೇಕಾರ, ರವಿಕಿರಣ ಪಾಟೀಲ, ಶಿವಬಸಯ್ಯ ಕುಲಕರ್ಣಿ, ಬಾವಕಾಜಿ ರಾವಳ, ಗಣೇಶ ಕುಂಬಾರ, ಅಧಿಕಾರಿಗಳಾದ ಕೆ.ಆರ್. ಮಠದ, ಮನೋಜಕುಮಾರ ಗಡಬಳ್ಳಿ, ಎಂ.ವಿ. ಬಳಿಗಾರ, ಕೆ.ಎಸ್. ಅಂಗಡಿ, ಡಾ. ರಾಜೇಂದ್ರ ಗೊಡ್ಡೆಮ್ಮಿ, ರಂಗಸ್ವಾಮಿ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರೂ 5 ಲಕ್ಷದ ವೀರಭದ್ರೇಶ್ವರ ಸಮುದಾಯ ಭವನ, ರೂ 95 ಲಕ್ಷದ ಕೂಡು ರಸ್ತೆ ಅಭಿವೃದ್ಧಿ, ಹುಡಾ ಗ್ರಾಮದಲ್ಲಿ ರೂ 48 ಲಕ್ಷದ ರಸ್ತೆ ಸುಧಾರಣೆ, ರೂ 4 ಲಕ್ಷದ ಬಸವೇಶ್ವರ ಸಮುದಾಯ ಭವನ, ಗುಡಗುಡಿ ಗ್ರಾಮದಲ್ಲಿ ರೂ 5 ಲಕ್ಷ ವೆಚ್ಚದ ಸಮುದಾಯ ಭವನ ಸೇರಿದಂತೆ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ 12 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.