ಚಿಕ್ಕನಾಯಕನಹಳ್ಳಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯ ಹಾಲು ಉತ್ಪಾದಕರಿಗೆ `ಜನಶ್ರೀ~ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಇಲ್ಲಿ ಶುಕ್ರವಾರ ತಿಳಿಸಿದರು.
ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಡೆದ ಜನಶ್ರೀ ವಿಮಾ ಯೋಜನೆ ಆಂದೋಲನ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ಜಿಲ್ಲೆಯ 26,429 ರೈತರಿಗೆ ವಿಮಾ ಯೋಜನೆ ಜಾರಿಗೊಳಿಸಿ ರೂ. 28 ಲಕ್ಷ ಪ್ರೀಮಿಯಂ ಹಣ ಪಾವತಿಸಲಾಗಿದೆ. ಜಿಲ್ಲೆಯಲ್ಲಿ 1 ಲಕ್ಷ ರೈತರಿಗೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಕಡಿಮೆ ಪ್ರೀಮಿಯಂ ಹಣದಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಹಾಲು ಉತ್ಪಾದಿಸುವ ರೈತರಿಗೆ ಒದಗಿಸಲಾಗುವುದು. ಈಗಾಗಲೇ ಮೃತರಾಗಿರುವ 34 ಸದಸ್ಯರ ಕುಟುಂಬಕ್ಕೆ ಈ ಯೋಜನೆಯಡಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಇನ್ನು ಮುಂದೆ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ನೀಡುತ್ತಿದ್ದ ಪಶು ಆಹಾರ ವಿತರಣೆಯಲ್ಲಿ ಕೊರತೆಯಾಗದು ಎಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್, ಉಪವ್ಯವ ಸ್ಥಾಪಕ ಡಾ.ಸುಬ್ರಾಯಭಟ್, ಡಾ.ಚಂದ್ರಪ್ಪ, ಕಲ್ಪವೃಕ್ಷ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ರಾಜ್ಕುಮಾರ್, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎ.ಪಿ.ಯರ್ರ ಗುಂಟಪ್ಪ, ಎಸ್.ದೀಪಕ್, ಬುದ್ದಿ ಪ್ರಸಾದ್, ಸೋಮರಾಜ್, ನಂದಿನಿ ಪತ್ತಿನ ಸಹಕಾರ ಸಂಘದ ಸಿದ್ದಲಿಂಗಮೂರ್ತಿ, ಸಾಸಲು ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂತೋಷ್ ಉಪಸ್ಥಿತರಿದ್ದರು.