ಮುನಿರಾಬಾದ್: ಇಲ್ಲಿಗೆ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಅಂಗವಿಕಲರೇ ನಿರ್ವಹಿಸುವ ನೂತನವಾಗಿ ಆರಂಭಿಸಲಾಗಿರುವ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಈಚೆಗೆ ಉದ್ಘಾಟಿಸಲಾಯಿತು.
ಪವನ ಗ್ರಾಮೀಣಾಭಿವೃದ್ಧಿ ಹಾಗೂ ಅಂಗವಿಕಲರ ಸಂಘ ನಿರ್ವಹಿಸುವ ತರಬೇತಿ ಕೇಂದ್ರವನ್ನು ಮುನಿರಾಬಾದ್ ಠಾಣಾಧಿಕಾರಿ ವಿಶ್ವನಾಥ ಹಿರೇಗೌಡರ್ ಉದ್ಘಾಟಿಸಿ ಮಾತನಾಡಿ, ಅಂಗವಿಕಲತೆಯನ್ನು ಮರೆಸುವ ಕ್ರಿಯಾಶೀಲತೆಯನ್ನು ಹೊಂದಿರುವ ಇಲ್ಲಿನ ಪದಾಧಿಕಾರಿಗಳು ತರಬೇತಿ ಕೊಡುವ ಮೂಲಕ ಇನ್ನೊಬ್ಬರ ಬದುಕಿಗೆ ಆಸರೆಯಾಗುವ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಅವರ ಸೇವೆಯನ್ನು ಶ್ಲಾಘಿ ಸಿದರು.
ಪ್ರಾಸ್ತಾವಿಕ ಮಾತನಾಡಿದ ಹುಲಿಗಿಯ ಸಾದಿಕ್, ತಮ್ಮ ನ್ಯೂನ್ಯತೆಯನ್ನು ಮರೆತು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಯನ್ನು ನೋಡಿದರೆ ಇವರು ಅಂಗವಿಕಲರಲ್ಲ, ಎಲ್ಲಾ ಅಂಗಗಳನ್ನು ಹೊಂದಿದ್ದು ಇತರರಿಗೆ ನೆರವಾಗದ ನಾವೇ ನಿಜವಾದ ಅಂಗವಿಕಲರು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಅಗಳಕೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಕನಕಗಿರಿ ಮಾತನಾಡಿದರು. ಹಿಟ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬುಸಾಬ್ ಸೈಯದ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಶೀಲಮ್ಮ ವೆಂಕಟೇಶ, ವಕೀಲರಾದ ಗ್ಯಾನಪ್ಪ ಚಿಲ್ಕಮುಕಿ, ಗಂಗಾಧರಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ ಪಲ್ಲೇದ, ವಿಜಯಕುಮಾರ್ ಇತರರು ವೇದಿಕೆಯಲ್ಲಿದ್ದರು.
ಸಂಸ್ಥೆಯ ಅಧ್ಯಕ್ಷ ಅಂಜಿನಪ್ಪ ಪೂಜಾರ್, ಉಪಾಧ್ಯಕ್ಷ ಅಂದಿಗಾಲಪ್ಪ ಸಿಂದೋಗಿ, ಕಾರ್ಯದರ್ಶಿ ಮಂಜುನಾಥ ಸುರ್ವೆ ಮತ್ತು ಇತರ ಸದಸ್ಯರು ಇದ್ದರು. ಹನುಮವ್ವ ಬೂದಿಹಾಳ ಪ್ರಾರ್ಥಿಸಿದರು. ವಾಗೀಶ ಪಾಟೀಲ್ ವಂದಿಸಿದರು. ಶಹಪೂರ ಗ್ರಾಮದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.