ಬಸವಕಲ್ಯಾಣ: ತಾಲ್ಲೂಕಿನ ಹುಲಸೂರನಲ್ಲಿ ಹಳೆಯ ಕಾಲದ ಮತ್ತು ಪ್ರಸಿದ್ದವಾದ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಬುಧವಾರ ಸಂಜೆ ಅನೇಕ ಭಕ್ತಾದಿಗಳ ಮಧ್ಯೆ ರಥೋತ್ಸವ ವಿಜೃಂಭಣೆಯಿಂದ ನೆರವೆರಿತು.
ಯುಗಾದಿಗೆ ರುದ್ರಾಭಿಷೇಕ ಮತ್ತು ಪೂಜೆ ನಡೆಸುವ ಮೂಲಕ ಆರಂಭವಾದ ಜಾತ್ರೆ ನಾಲ್ಕು ದಿನಗಳವರೆಗೆ ನಡೆಯಿತು.
ಎರಡನೇ ದಿನ ಅಗ್ನಿಪೂಜೆ ನೆರವೇರಿಸಲಾಯಿತು. ಮೊದಲ ದಿನದಿಂದ ಪ್ರತಿದಿನ ಸಂಜೆ ಗ್ರಾಮದಲ್ಲಿ ಸವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಭಜನಾ ತಂಡದವರು, ಡೊಳ್ಳು ಕುಣಿತದವರು ಪಾಲ್ಗೊಂಡಿದ್ದರು.
ರಥೋತ್ಸವಕ್ಕೆ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಚಾಲನೆ ಕೊಟ್ಟರು. ನಂತರ ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂದು ಜಯಘೋಷ ಹಾಕುತ್ತ ರಥ ಎಳೆಯಲಾಯಿತು. ಆಕರ್ಷಕವಾಗಿ ಸಿಂಗರಿಸಿದ್ದ ರಥದ ಮೇಲೆ ಭಕ್ತರು ಬಾಳೆಹಣ್ಣು, ನಾಣ್ಯ ಇತ್ಯಾದಿ ಎಸೆದು ಸಂಭ್ರಮಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕಾಶಿನಾಥ ಪಾರಶೆಟ್ಟೆ, ಚಂದ್ರಕಾಂತ ದೇಟ್ನೆ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.