ಹೂವಿನ ಹಡಗಲಿ: ಪಟ್ಟಣದಲ್ಲಿ ಗುರುವಾರ ಸಂಭ್ರಮದಿಂದ ಹಜರತ್ ಸೈಯದ್ ತಾಜುದ್ದೀನ್ ಬಾಬಾ, ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ)ಯ ಉರುಸ್ ಜರುಗಿತು.
ಉರುಸಿನ ಹಿಂದಿನ (ಬುಧವಾರ ರಾತ್ರಿ) ದಿನ ಬಹು ನಿರೀಕ್ಷಿತ ಗಂಧ ಮಹೋತ್ಸವ ನಡೆಯಿತು. ಉರುಸಿನ ಪ್ರಯುಕ್ತ ರಾಜ್ಬಾಗ್ ಸವಾರ್ನಿಗೆ ಭಕ್ತಾದಿಗಳು ಅನೇಕ ರೀತಿಯ ನೈವೇದ್ಯಗಳನ್ನು ಓದಿಕೆ ಮಾಡುವ ಮೂಲಕ ಆಚರಿಸಿ ಸಂಭ್ರಮಿಸುತ್ತಿದ್ದರು.
ಹಲವು ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಾ ಮತ್ತು ಹರಕೆ ತೀರಿಸುತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತಾದಿಗಳು ಯಮನೂರು ಸ್ವಾಮಿಗೆ ಓದಿಕೆ ಮಾಡಿಸಲು ಮಾದ್ಲಿ, ಅರಿಶಿನ ಕಠ, ಘೋಡಾ, ಸಕ್ಕರೆಯ ಜೊತೆಗೆ ಹಲಗೆ ಬಾರಿಸುತ್ತಾ ಮತ್ತು ಎತ್ತುಗಳ ಮೆರವಣಿಗೆಯನ್ನು ಮಾಡುತ್ತಾ ದರ್ಗಾಕ್ಕೆ ಆಗಮಿಸುತ್ತಿದ್ದರು.
ದರ್ಗಾದ ಮುಂಭಾಗದಲ್ಲಿ ಅನೇಕ ಭಕ್ತಾದಿಗಳು ಉಪ್ಪು, ಕೊಬ್ಬರಿಯನ್ನು ಸುಟ್ಟು ಶೇಖರಿಸಿಟ್ಟುಕೊಂಡು ಮನೆ ಗಳಿಗೆ ತೆರಳುತ್ತಿದ್ದರು. ವ್ಯಕ್ತಿಯಲ್ಲಿನ ಅನೇಕ ರೋಗಗಳಿಗೆ ಮದ್ದು ನೀಡುವ ಸಾಧನವಾಗಿ ಇದನ್ನು ಉಪಯೋಗಿ ಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಬಾಲಕರು, ಯುವಕರು, ಯುವತಿಯರು, ಮಧ್ಯ ವಯಸ್ಕರು, ವೃದ್ಧರು ಎಂಬ ವಯೋಮಾನದ ಭೇದವಿಲ್ಲದೆ ದಿನವಿಡೀ ಭಕ್ತಾದಿಗಳು ದರ್ಗಾಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಉರುಸಿನ ಪ್ರಯುಕ್ತ ಸ್ಥಳೀಯ ರಲ್ಲದೆ ಸುತ್ತಲಿನ ಹರಪನಹಳ್ಳಿ, ದಾವಣಗೆರೆ, ಹಗರಿ ಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಬಳ್ಳಾರಿ, ಗದಗ, ಮುಂಡರಗಿ, ಕೊಪ್ಪಳ, ರಾಣೇಬೆನ್ನೂರು, ಗುತ್ತಲ್ಲ, ಹಾವೇರಿಗಳನ್ನು ಒಳಗೊಂಡಂತೆ ಹಲವು ಪಟ್ಟಣಗಳಿಂದ ಆಗಮಿಸಿದ್ದ ಭಕ್ತಾದಿಗಳು ದರ್ಗಾದ ಅಕ್ಕ- ಪಕ್ಕದಲ್ಲಿ ಟೆಂಟ್ಗಳನ್ನು ಹಾಕಿ ಬೀಡು ಬಿಟ್ಟಿದ್ದರು.