ಹಬ್ಬ ಹರಿದಿನಗಳಲ್ಲಿ ನಗರದ ವಿವಿಧ ಬಡಾವಣೆಗಳಿಂದ ಪರ ಊರುಗಳಿಗೆ ಹೋಗುವ ಪ್ರಯಾಣಿಕರ ಸೌಕರ್ಯಕ್ಕಾಗಿ ಬಿ.ಎಂ.ಟಿ.ಸಿ. ಹೆಚ್ಚುವರಿ ಬಸ್ ಓಡಿಸುತ್ತಿದೆ. ಇದಕ್ಕಾಗಿ ಸಂಸ್ಥೆಗೆ ಅಭಿನಂದನೆ. ಆದರೆ ಚನ್ನಮ್ಮನಕೆರೆ ಅಚ್ಚುಕಟ್ಟು (ಡಿಪೋ 13) ಹಾಗೂ ಕತ್ರಗುಪ್ಪೆ ನಿಲ್ದಾಣದಿಂದ ಹಬ್ಬಗಳ ದಿನಗಳಂದು ಸಂಜೆ ಆಗುತ್ತಿದ್ದಂತೆ ಬಸ್ಗಳೇ ನಾಪತ್ತೆ ಆಗುತ್ತಿದೆ.
ಈ ಮಾರ್ಗದಲ್ಲಿ ಸಂಚರಿಸುವ 45ನೇ ಸಂಖ್ಯೆಯ ಬಸ್ಗಳು ಸಂಜೆ 7ರ ನಂತರ ಪತ್ತೆಯೇ ಇರಲ್ಲ. ಕಡೇ ಪಕ್ಷ ವೋಲ್ವೋ, ಪುಷ್ಪಕ್ಗಳೂ ನಾಪತ್ತೆ ಆಗಿರುತ್ತವೆ. ಇದಕ್ಕೆ ತಾಜಾ ಉದಾಹರಣೆಗೆ ಗೌರಿ ಗಣೇಶ ಸೇರಿದಂತೆ ರಂಜಾನ್ ಹೀಗೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಇಲ್ಲಿಂದ (ಚ. ಕೆ. ಅಚ್ಚುಕಟ್ಟು ಹಾಗೂ ಕತ್ರಗುಪ್ಪೆ) ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.
ಆದರೆ ಸಂ. 7-30 ರಿಂದ 8-30 ಆದರೂ ಮೆಜೆಸ್ಟಿಕ್ ಕಡೆಗೆ ಒಂದೂ ಬಸ್ ಬರುವುದಿಲ್ಲ. ಜನರ ಪರದಾಟ ತಪ್ಪಲಿಲ್ಲ. ಕೆಲವರು ದುಪ್ಪಟ್ಟು ಹಣ ತೆತ್ತು ಆಟೊ ಹಿಡಿದರು. ಇನ್ನಾದರೂ ಸಾಲು ಸಾಲು ರಜೆ ಬಂದಾಗ ಬಿ.ಎಂ.ಟಿ.ಸಿ. ಇಲ್ಲಿಂದ ಸಂಜೆಯ ನಂತರ ಹೆಚ್ಚು ಬಸ್ ಓಡಿಸಲಿ ಎಂದು ಕೋರುತ್ತೇನೆ.