ವಿಜಾಪುರ: ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಚತುಷ್ಪಥ ರಸ್ತೆ ನಿರ್ಮಿಸಿ, ರೈತರಿಗೆ ಹಾನಿ ಮಾಡುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ರೈತರ ಜಮೀನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಗುರುವಾರ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ 150 ರೈತರಿಗೆ ಹಾನಿ ಮಾಡುವುದು ಹಾಗೂ ಪುರಾತನ ಸ್ಮಶಾನಕ್ಕೆ ಧಕ್ಕೆ ತರುವುದು ಬೇಡ. ಈಗಿರುವ ಹೆದ್ದಾರಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿಯೇ ಹೊರ ರಸ್ತೆ ನಿರ್ಮಿಸಬೇಕು ಎಂದರು.
ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸರ್ಕಾರ 8 ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ. ಆದರೆ, ಹಿಟ್ಟಿನಹಳ್ಳಿಯಲ್ಲಿಯ ಭೂಸ್ವಾಧೀನಕ್ಕೆ ಕೇವಲ 96 ಸಾವಿರ ರೂಪಾಯಿ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ರಾಜ್ಯ ಮಾನವ ಹಕ್ಕುಗಳ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಈಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹೊಸ ರಸ್ತೆ ನಿರ್ಮಿಸಬೇಕು. ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಶಾಸಕ ಆರ್.ಕೆ. ರಾಠೋಡ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ) ಮಾತನಾಡಿ, `ಅಭಿವೃದ್ಧಿಗೆ ಬೆಂಬಲವಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಬಡ ರೈತರಿಗೆ ಅನ್ಯಾಯ ಮಾಡುವುದು ಬೇಡ~ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ದಾನಪ್ಪ ಕಟ್ಟಿಮನಿ, ಜೆಡಿಎಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದರು. ರಾಜಪಾಲ ಚವ್ಹಾಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಶ್ರೀಕಾಂತ ಚೌಧರಿ, ದ್ಯಾಮಪ್ಪ ಇಂಡಿ, ಮುತ್ತಣ್ಣ ಜಂಗಮಶೆಟ್ಟಿ, ಎಂ.ಆರ್. ಪಾಟೀಲ (ಬಳ್ಳೊಳ್ಳಿ), ಅಶೋಕ ಸಾಲಿ, ಚಂದ್ರಶೇಖರ ಮಲಘಾಣ, ವಿಜಯ ಡೋಣಿ, ಚಂದ್ರು ಇಂಡಿ, ಎಂ.ಎ. ಕಾಲೇಬಾಗ, ಚಂದ್ರಕಾಂತ ಹಿರೇಮಠ, ರೇಷ್ಮಾ ಪಡೇಕನೂರ, ಆನಂದ ಔದಿ ಇತರರು ಪಾಲ್ಗೊಂಡಿದ್ದರು.ಎಎಸ್ಪಿ ಅಜಯ್ ಹಿಲೋರಿ ಅವರಿಗೆ ಮನವಿ ಸಲ್ಲಿಸಲಾಯಿತು.