ಕಂಪ್ಲಿ: ಜನರ ನಿತ್ಯ ಗೋಳಿನ ಸಂಪರ್ಕ ಜಾಲವಾಗಿದ್ದ ಕಂಪ್ಲಿ-ಕುಡಿತಿನಿ ರಾಜ್ಯ ಹೆದ್ದಾರಿ-29 ದುರಸ್ತಿ ಕಾರ್ಯ ಆರಂಭವಾಗಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗಿರುವ ಕಾರಣ ರಸ್ತೆ ತುಂಬೆಲ್ಲ ದೂಳು ಆವರಿಸಿಕೊಂಡಿದೆ. ದೂಳು ಬೆಳೆಗಳ ಮೇಲೂ ಬೀಳುತ್ತಿರುವ ಕಾರಣ ಫಸಲುಗಳು ಮೊಳಕೆಯೊಡೆಯದೇ ರೈತರು ಕಂಗಾಲಾಗಿದ್ದಾರೆ.
ಮೆಟ್ರಿ- ಕುಡುತಿನಿ ಹೆದ್ದಾರಿ ಅಕ್ಕಪಕ್ಕದ ಹೊಲಗಳಲ್ಲಿ ಬೆಳೆದ ಹಿಂಗಾರು ಫಸಲುಗಳು ದೂಳಿನಲ್ಲಿ ಮಿಂದು, ಇಳುವರಿ ಕುಸಿದು ಸಾವಿರಾರು ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ದೂಳಿನ ಮಜ್ಜನದಿಂದಾಗಿ ರೈತರು, ಕೃಷಿ ಕಾರ್ಮಿಕರು ದಮ್ಮು, ಕೆಮ್ಮು, ಅಸ್ತಮಾ ಕಾಯಿಲೆಯಿಂದ ಬಳಲುವಂತಾಗಿದೆ. ಹೆದ್ದಾರಿ ಬದಿಯ ಮನೆಗಳು ಕಿಟಕಿ ತೆರೆಯುವಂತಿಲ್ಲ. ಕಿಟಕಿ, ಬಾಗಿಲು ತೆಗೆದರೆ ಸಾಕು. ಮನೆಯಲ್ಲಿ ಮಣ್ಣು ತುಂಬಿಕೊಳ್ಳುತ್ತದೆ.
ಕುಡುತಿನಿಯಿಂದ ದೇವಲಾಪುರ ಮಾರೆಮ್ಮ ದೇವಸ್ಥಾನದವರೆಗೆ, ಕಂಪ್ಲಿ ಕೋಟೆಯಿಂದ ದೇವಸಮುದ್ರ ತಿರುವುವರೆಗೆ ಶಾಶ್ವತ ಡಾಂಬರೀಕರಣ ಆಗುವವರೆಗೆ ರಸ್ತೆಗೆ ನಿತ್ಯ ಬೆಳೆಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ರಸ್ತೆಗೆ ನೀರು ಸಿಂಪಡಿಸಬೇಕು. ರಸ್ತೆ ಪಕ್ಕದ ಹೊಲಗಳಲ್ಲಿ ಕೆಂದೂಳಿನಿಂದ ಇಳುವರಿ ಕುಸಿತವಾಗಿದ್ದು, ಪರಿಹಾರ ಪಾವತಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.