ಹೆಬ್ರಿ: ಕಬ್ಬಿನಾಲೆಯ ಸದಾಶಿವ ಗೌಡ ಅವರ ಹತ್ಯೆ ಬಳಿಕ ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ನಿರಂತರ ಚಟುವಟಿಕೆಯಲ್ಲಿರುವ ನಕ್ಸಲರು ಗುರುವಾರ ತಡರಾತ್ರಿ ಮತ್ತೆ ಹೆಬ್ರಿ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಅಜ್ಜೊಳ್ಳಿ ಮತ್ತು ಗ್ರಾಮದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
`ಶಸ್ತ್ರಸಜ್ಜಿತ ನಕ್ಸಲರ ತಂಡ ಗ್ರಾಮಸ್ಥರಿಂದ ಅಡುಗೆ ಸಾಮಾನು ಪಡೆಯಿತು. ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಗ್ರಾಮಸ್ಥರಿಗೆ ಬೆದರಿಕೆ ಕೂಡ ಹಾಕಿದೆ. ತಂಡದಲ್ಲಿ ಏಳು ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು~ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ವೆಂಕಟೇಶಪ್ಪ, ಕಾರ್ಕಳ ಡಿವೈಎಸ್ಪಿ ಸಂತೋಷ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಹೆಬ್ರಿಯಲ್ಲಿ ಮೊಕ್ಕಾಂ ಹೂಡಿದೆ.