ಹುಬ್ಬಳ್ಳಿ: `ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ದ್ವಿಚಕ್ರ ಸವಾರರಿಗೆ ವೇಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಈ ನಿರ್ಧಾರದಿಂದ ತಕ್ಷಣ ಹಿಂದೆಸರಿಯಬೇಕು' ಎಂದು ಕೆಜೆಪಿ ಮುಖಂಡ ಚಂದ್ರಶೇಖರ ಗೋಕಾಕ ಹೇಳಿದರು.
ಹೆಲ್ಮೆಟ್ ವಿರೋಧಿಸಿ ಕೆಜೆಪಿ ಕಾರ್ಯಕರ್ತರು ನಗರದ ಚನ್ನಮ್ಮ ಸರ್ಕಲ್ನಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆ ಕಾಲಕ್ಕೆ ಅವರು ಮಾತನಾಡಿದರು.
`ಹೆಲ್ಮೆಟ್ ಧರಿಸಿ ನಗರದಲ್ಲಿ ದ್ವಿಚಕ್ರ ಚಲಾಯಿಸಲು ಕಷ್ಟವಾಗುತ್ತಿದೆ. ಮಹಾ ನಗರದಲ್ಲಿ ಸಾಕಷ್ಟು ಒಳರಸ್ತೆ ಮತ್ತು ಹೆಚ್ಚಿನ ವಾಹನ ದಟ್ಟಣೆ ಉಂಟಾಗು ವುದರಿಂದ ಹೆಲ್ಮೆಟ್ ಧರಿಸಿ ಹೋಗಲು ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಹೆಲ್ಮೆಟ್ ಕಡ್ಡಾಯ ಧಾರಣೆಯಿಂದ ರಿಯಾಯಿತಿ ನೀಡಬೇಕು' ಎಂದು ಆಗ್ರಹಿಸಿದರು.
`ಹೆಲ್ಮೆಟ್ ಕಡ್ಡಾಯದಿಂದ ಕಳ್ಳತನ, ಡಕಾಯಿತಿ, ಕೋಮು ಗಲಭೆ ನಡೆಸು ವವರಿಗೆ, ಉಗ್ರರಿಗೆ ಓಡಾಡಲು ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ ತೆಗೆದುಹಾಕಿ, ನಗರ ಬಿಟ್ಟು 15 ಕಿ.ಮೀ ದೂರ ಚಲಿಸು ವವರಿಗೆ ಕಡ್ಡಾಯಗೊಳಿಸಬೇಕು' ಎಂದರು.
`ಈ ಪ್ರತಿಭಟನೆಗೆ ಪೊಲೀಸ್ ಇಲಾಖೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಹೆಲ್ಮೆಟ್ ಕಳ್ಳತನ ಅಥವಾ ಹೆಲ್ಮೆಟ್ ನಾಪತ್ತೆ ಪ್ರಕರಣ ದೂರು ನೀಡಲಾಗುವುದು' ಎಂದರು.
`ಹೆಲ್ಮೆಟ್ ಕಡ್ಡಾಯದ ಹಿಂದೆ ಕಂಪೆನಿಗಳ ಲಾಬಿ ಇದೆ' ಎಂದರು.
ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ಅಜ್ಜಪ್ಪ ಬೆಂಡಿಗೇರಿ, ವಿಷ್ಣು ಪವಾರ, ಉದ್ಯಮಿ ರಮೇಶ ಬಾಫಣ ಮತ್ತಿತರರು ಇದ್ದರು. ಸಹಾಯಕ ಪೊಲೀಸ್ ಕಮಿಷನರ್ (ಉತ್ತರ) ಎ.ಆರ್.ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು.