ಬೆಂಗಳೂರು:ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ವಿಧಾನಸೌಧಕ್ಕೆ ಆಗಮಿಸಿದ ಬಾಲಿವುಡ್ ನಟಿ ಹೇಮಾಮಾಲಿನಿ ಅವರನ್ನು ನೋಡಲು ನೂಕುನುಗ್ಗಲು ಉಂಟಾದ ಪ್ರಸಂಗ ಸೋಮವಾರ ನಡೆಯಿತು.
ಹೇಮಾಮಾಲಿನಿ ಬರುತ್ತಾರೆನ್ನುವ ವಿಚಾರ ಗೊತ್ತಾದ ನಂತರ ವಿಧಾನಸೌಧದ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಅಲ್ಲಿಗೆ ಬಂದಿದ್ದ ಸಾರ್ವಜನಿಕರು ಮೊದಲ ಮಹಡಿಯಲ್ಲಿ ಸಾಲುಗಟ್ಟಿ ನಿಂತರು. ಅವರು ಬಂದು ಹೋಗುವವರೆಗೂ ಬಹುತೇಕರು ತಮ್ಮ ಕರ್ತವ್ಯದತ್ತ ಮುಖ ಮಾಡಲಿಲ್ಲ. ಹೇಮಾ ದರ್ಶನ ನಂತರ ಮುಖ ಅರಳಿಸಿಕೊಂಡು ತಮ್ಮ ಕೊಠಡಿಗಳತ್ತ ತೆರಳಿದರು.
ಸಚಿವರಿಗೂ ಕಾತುರ: ಹೇಮಾಮಾಲಿನಿಯವರನ್ನು ನೋಡಲು ಕೇವಲ ಸಿಬ್ಬಂದಿ ಮತ್ತು ಸಾರ್ವಜನಿಕರಷ್ಟೇ ಕಾತುರ ಇರಲಿಲ್ಲ. ಸಚಿವರು ಕೂಡ ಆ ಸಾಲಿನಲ್ಲಿದ್ದರು. ಸಚಿವರ ದಂಡು ಕೂಡ ಹೇಮಾ ಅವರನ್ನು ಹಿಂಬಾಲಿಸಿ, ನಾಮಪತ್ರ ಸಲ್ಲಿಸುವ ಕೊಠಡಿಗೆ ನುಗ್ಗಿದ್ದು ವಿಶೇಷವಾಗಿತ್ತು.
ಬಿಜೆಪಿ ಕಚೇರಿಗೆ: ವಿಧಾನಸೌಧಕ್ಕೆ ತೆರಳುವುದಕ್ಕೂ ಮುನ್ನ ಅವರು ಮಲ್ಲೇಶ್ವರದ ಬಿಜೆಪಿ ಕಚೇರಿಗೂ ಭೇಟಿ ನೀಡಿದರು. ಅಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರ ಮುಖಂಡರ ಜತೆ ಮಾತುಕತೆ ನಡೆಸಿದರು.