ತುಮಕೂರು: ಕಾಶಿಯಾತ್ರೆ ಬಳಿಕ ರಾಜಕೀಯ ಶಕ್ತಿ ಪ್ರದರ್ಶನ ತೋರಿಸುತ್ತೇನೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೈಕಮಾಂಡ್ಗೆ ದೂರು ನೀಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಸಿದ್ದಗಂಗಾ ಮಠದ ಆವರಣದಲ್ಲಿ ವಿಶ್ವದ ಅತಿ ಎತ್ತರದ ಶಿವಲಿಂಗ ಸ್ಥಾಪನೆಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ಪತ್ರಕರ್ತರ ಜತೆ ಅವರು ಮಾತನಾಡಿದರು.
ಸಮಾರಂಭಗಳಲ್ಲಿ ನಿಮ್ಮನ್ನು ನೋಡಿದರೂ ನೋಡದಂತೆ ಯಡಿಯೂರಪ್ಪ ನಡೆದುಕೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಹಾಗೇನಿಲ್ಲ, ಅವರನ್ನು ನಾನೇ ಮಾತನಾಡಿಸುತ್ತೇನೆ. ಅವರ ಮನೆಗೂ ಹೋಗಿದ್ದೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದರು.
ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನ ಕುರಿತು ಅವರನ್ನೇ ಕೇಳಬೇಕು. ಉಡುಪಿ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಹೊಸಬರಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.