ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಿಂದ ರಿಜಿಸ್ಟ್ರಾರ್ ಆದೇಶ ರದ್ದು

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಎ.ಎಸ್. ಪ್ರೇಮನಾಥ ಅವರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹೊಸದಾಗಿ ಹುದ್ದೆ ಸೃಷ್ಟಿ ಮಾಡಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದು ಮಾಡಿದೆ.

ಕಳೆದ ಜುಲೈ 2ರಂದು ರಿಜಿಸ್ಟ್ರಾರ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆರ್.ರಾಮಲಿಂಗೇಗೌಡ ಹಾಗೂ ನಿರ್ದೇಶಕ (ಮಾನವ ಸಂಪನ್ಮೂಲ ಹಾಗೂ ತರಬೇತಿ) ಡಾ. ಎಂ.ಎನ್.ವೆಂಕಟರಾಮು ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮಾನ್ಯ ಮಾಡಿದ್ದಾರೆ.

ಸೇವಾ ಹಿರಿತನದಲ್ಲಿ ತಮಗಿಂತ ಕಡಿಮೆ ಅವಧಿಯ ಸೇವೆ ಸಲ್ಲಿಸಿರುವ ಪ್ರೇಮನಾಥ ಅವರಿಗಾಗಿ ಕಾನೂನು ಮೀರಿ ಹೊಸ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಇದನ್ನು ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದಾರೆ.

ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿರುವುದು ಇಷ್ಟು..

`ರಾಮಲಿಂಗೇಗೌಡ ಅವರ ಹುದ್ದೆಯನ್ನು ವ್ಯವಸ್ಥಾಪಕ ನಿರ್ದೇಶಕ (ಯೋಜನೆ ಮತ್ತು ತರಬೇತಿ) ಎಂದು ಬದಲಾಯಿಸಿ ಹೊಸದಾಗಿ ಎಂಡಿ (ಸಿಇಒ) ಹುದ್ದೆ ಸೃಷ್ಟಿ ಮಾಡಿರುವುದಕ್ಕೆ ಕಾನೂನಿನ ಅಡಿ ಮಾನ್ಯತೆ  ಇಲ್ಲ.
ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಇದಕ್ಕೆ ಅನುಮೋದನೆ ನೀಡಿರುವುದು ಅಚ್ಚರಿ ತರುವಂಥದ್ದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

`ಗೌಡ ಅವರಿಗೆ ಎಂಡಿ ಹುದ್ದೆಗೆ ಬಡ್ತಿ ಸಿಕ್ಕ ನಂತರ ಅದನ್ನು ತಡೆಯುವ ನಿಟ್ಟಿನಲ್ಲಿ ನಿರ್ದೇಶಕರ ಮಂಡಳಿ ಸರ್ವ ಪ್ರಯತ್ನ ಮಾಡಿದೆ.

ಈ ಕುರಿತು ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಗೌಡ ಅವರ ವಿರುದ್ಧ ಹಲವಾರು ಗಂಭೀರ ಸ್ವರೂಪದ ಆಪಾದನೆಗಳು ಇರುವುದಾಗಿ ತಿಳಿಸುವ ಮೂಲಕ ಪ್ರೇಮನಾಥ ಅವರಿಗೆ ಹುದ್ದೆ ನೀಡಲು ಹುನ್ನಾರ ನಡೆಸಲಾಗಿದೆ.

`ಇಂತಹ ಹುನ್ನಾರ ನಡೆಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ನಿರ್ದೇಶಕರ ಮಂಡಳಿ, ಅದರ ಬದಲು ಎಂಡಿ ಹುದ್ದೆಯ ಸಮಾನಾಂತರ ಹುದ್ದೆ ಸೃಷ್ಟಿಗೆ ಮುಂದಾಗಿದೆ. ಇದಕ್ಕೆ ರಿಜಿಸ್ಟ್ರಾರ್ ಅಂಕಿತ ಕೂಡ ಬಿದ್ದಿದೆ. ಇದು ಕೆಎಂಎಫ್ ಬೈಲಾಗಳಿಗೆ ವಿರುದ್ಧವಾದುದು~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT