ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಿಂದ ಆರ್ಥಿಕ ಸಬಲತೆ: ಭವಾನಿ

Last Updated 31 ಜನವರಿ 2013, 6:57 IST
ಅಕ್ಷರ ಗಾತ್ರ

ಹಾಸನ: `ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಜತೆಗೆ ಇಡೀ ಕುಟುಂಬದ ಹೊಣೆಯನ್ನು ತಾನೇ ಹೊತ್ತುಕೊಂಡು ಮುನ್ನಡೆಯಬೇಕು. ಮಹಿಳೆಗೆ ಅಂಥ ಸಾಮರ್ಥ್ಯ ಇದೆ' ಎಂದು ಭವಾನಿ ರೇವಣ್ಣ ನುಡಿದರು.

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ಮತ್ತು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಸಹಾಯ ಸಂಘಗಳ ಮಹತ್ವ ಮತ್ತು ಸ್ವ ಸಹಾಯ ಸಂಘಗಳ ಮಹಾ ಮಂಡಳ ರಚನೆ ಕುರಿತ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಟಿ.ವಿ ಧಾರಾವಾಹಿಗಳು ಈಗ ಹೆಣ್ಣುಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿವೆ. ಮಾಧ್ಯಮಗಳಿಂದ ಒಳ್ಳೆಯದನ್ನು ಮಾತ್ರ ಸ್ವೀಕರಿಸಬೇಕು. ನಾಲ್ಕು ಮಂದಿ ಸೇರಿದಾಗ ಯಾರದ್ದೋ ಮನೆಯ ವಿಚಾರ ಚರ್ಚಿಸುವ ಬದಲು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು. ಹಣ ಗಳಿಸುವದನ್ನೇ ಮುಖ್ಯವಾಗಿಸದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು, ಯಾವ ಕಾರಣಕ್ಕೂ ಸಂಸಾರದ ಚೌಕಟ್ಟನ್ನು ಮೀರಿ ಹೋಗಬಾರದು' ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರೇವಣ್ಣ, `ಕಳೆದ ಒಂದು ವರ್ಷದಲ್ಲಿ ಕೆ.ಎಂ.ಎಫ್  ಪಶು ಆಹಾರ ಉತ್ಪಾ ದನಾ ಘಟಕ 59 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ನಾನು ಅಧ್ಯಕ್ಷನಾಗಿದ್ದಾಗ ಈ ಘಟಕಗಳ ಕಾರ್ಯವೈಖರಿಯಿಂದ ಖಾಸಗಿ ಸಂಸ್ಥೆಗಳು ಬಾಗಿಲು ಮುಚ್ಚಿದ್ದವು. ಇಂದು ನಂದಿನಿ ಪಶು ಆಹಾರಕ್ಕಿಂತ ಕಡಿಮೆ ಬೆಲೆಗೆ ಖಾಸಗಿಯವರು ಪಶು ಆಹಾರ ಮಾರಾಟ ಮಾಡುತ್ತಿದ್ದಾರೆ' ಎಂದರು.

ಹಾಲು ಒಕ್ಕೂಟಗಳನ್ನು ಸರಿಯಾಗಿ ಮುನ್ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ಸಚಿವರು ಲೂಟಿ ಮಾಡುವುದರಲ್ಲೇ ನಿರತರಾಗಿದ್ದಾರೆ. ಸಾವಿರಾರು ಟನ್ ಬೆಣ್ಣೆ, ಹಾಲಿನ ಪುಡಿ ಮಾರಾಟವಾಗದೆ ಉಳಿದಿದೆ. ಕೆ.ಎಂ.ಎಫ್  ಮುನ್ನಡೆಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದಲ್ಲಿ ಒಕ್ಕೂಟಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು.

ನಮ್ಮ ಒಕ್ಕೂಟವನ್ನು ನಾವೇ ಮುನ್ನಡೆಸಲು ಸಮರ್ಥರಿದ್ದೇವೆ' ಎಂದರು. ಹಾಸನ ಸಹಕಾರಿ ಹಾಲು ಒಕ್ಕೂ ಟದ ನಿರ್ದೇಶಕ ಸತೀಶ್, ವ್ಯವಸ್ಥಾಪಕ ನಿರ್ದೇಶಕ ಬಿ.ಪಿ. ರಂಗನಾಥ್, ವ್ಯವಸ್ಥಾಪಕರಾದ ಗೋಪಾಲ, ಜಂಟಿ ನಿರ್ದೇಶಕಿ ಸ್ವರ್ಣಾ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT