ಹಳೇಬೀಡು: `ಹೊಯ್ಸಳ ದೇವಾಲಯ ಅಭೂತಪೂರ್ವ ಶಿಲ್ಪಕಲೆ ಹೊಂದಿವೆ. ಹೊಯ್ಸಳ ಅರಸರು ಕಲೆ-ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದರು ಎಂಬುದಕ್ಕೆ ದೇವಾಲಗಳು ಸಾಕ್ಷಿಯಾಗಿವೆ~ ಎಂದು ಐರ್ಲೆಂಡ್ ದೇಶದಲ್ಲಿರುವ ಭಾರತದ ರಾಯಭಾರಿ ದೇಬಿಷ್ ಚಕ್ರವರ್ತಿ ಹೇಳಿದರು.
ಪತ್ನಿಯೊಂದಿಗೆ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿದ ಅವರು ಹೊಯ್ಸಳೇಶ್ವರ ದೇವಾಲಯ ವೀಕ್ಷಿಸಿದ ನಂತರ ಮಾತನಾಡಿ `ಹೊಯ್ಸಳ ದೇವಾಲಯಗಳಲ್ಲಿ ಕಾಣುವಂತಹ ಸೂಕ್ಷ್ಮವಾದ ಕುಸುರಿ ಕೆತ್ತನೆ ಕೆಲಸ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ನನಗೆ ಆನಂದವಾಯಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಸಂಬಂಧ ಉತ್ತಮ ಮಾಹಿತಿ ನೀಡಿದೆ. ದೇವಾಲಯ ವೀಕ್ಷಣೆಗೆ ಎಲ್ಲ ವ್ಯವಸ್ಥೆ ಮಾಡಿದ್ದು, ಇದೇ ವ್ಯವಸ್ಥೆ ಮುಂದುವರಿಸಬೇಕು~ ಎಂದರು.
ಜಿಲ್ಲೆ ಹಾಗೂ ತಾಲ್ಲೂಕು ಆಡಳಿತ, ಸ್ಥಳೀಯ ಕಂದಾಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಸ್ವಾಗತಿಸಿದರು.
ತಹಶೀಲ್ದಾರ್ ಚಿದಾನಂದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ, ಉಪ ತಹಶೀಲ್ದಾರ್ ಶ್ರೀಧರಮೂರ್ತಿ, ಕಂದಾಯ ನಿರೀಕ್ಷಕ ಎನ್.ಡಿ. ರಂಗಸ್ವಾಮಿ ಹಾಜರಿದ್ದರು. ಪ್ರವಾಸೋದ್ಯಮ ಇಲಾಖೆಯ ಅಸ್ಲಾಮ್ ಷರೀಫ್ ದೇವಾಲಯದ ಬಗ್ಗೆ ವಿವರಣೆ ನೀಡಿದರು.