ಹೊಸನಗರ: ಮುಖ್ಯಮಂತ್ರಿ ಬೆಕ್ಕೋಡಿ ಸೇತುವೆಗೆ ` 25 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡುವ ಮೂಲಕ 4 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶರಾವತಿ ಮುಳುಗಡೆ ಸಂತ್ರಸ್ತರ 4 ದಶಕಗಳ ಕನಸು ನನಸು ಮಾಡಿರುವುದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಅರಮನೆಕೊಪ್ಪ, ಸಂಪೆಕಟೆ- ಹೊಸೂರು, ನಿಟ್ಟೂರು, ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 35 ಸಾವಿರ ಸಂತ್ರಸ್ತರ ಬಹುವರ್ಷಗಳ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸ್ತು ಎಂದಿರುವುದು ಗ್ರಾಮಸ್ಥರಿಗೆ ಸಂತೋಷ ತಂದಿದೆ.
ಎಚ್.ಎಚ್. ಸಂಪರ್ಕ ಕೊಂಡಿ: ಎರಡು ರಾಷ್ಟ್ರೀಯ ಹೆದ್ದಾರಿ ಎಚ್.ಎಚ್. 206, ಎಚ್.ಎಚ್. 17 ಮತ್ತು ಅದನ್ನು ಜೋಡಿಸುವ ಎರಡು ರಾಜ್ಯ ಹೆದ್ದಾರಿ (ಎಸ್.ಎಚ್. 77 ಮತ್ತು 26)ಗಳ ಸಂಪರ್ಕ ಕೊಂಡಿ ಈ ಸೇತುವೆ ಆಗುತ್ತದೆ. ಶಿವಮೊಗ್ಗ-ಸಾಗರ-ತಾಳುಗುಪ್ಪ ಹಾಗೂ ಕೊಂಕಣ ರೈಲ್ವೆಗಳ ಅಂತರಗಳನ್ನು ಕಡಿಮೆಗೊಳಿಸುವ ಈ ಸೇತುವೆಗಾಗಿ ಬೆಕ್ಕೋಡಿ ಸೇತುವೆ ನಿರ್ಮಾಣ ಸಮಿತಿ ಕಳೆದ 10 ವರ್ಷದಿಂದ ಹೋರಾಟ ನಡೆಸುತ್ತಾ ಬಂದಿತ್ತು.
ಬಹುನಿರೀಕ್ಷಿತ ಬೆಕ್ಕೋಡಿ ಸೇತುವೆ ನಿರ್ಮಾಣದಿಂದ ಶಿವಮೊಗ್ಗದಿಂದ ಕೊಡಚಾದ್ರಿ, ಕೊಲ್ಲೂರು, ಸಿಗಂದೂರು ಕ್ಷೇತ್ರಗಳಿಗೆ ಸುಮಾರು 20 ಕಿ.ಮೀ. ದೂರ ಹಾಗೂ ಹುಬ್ಬಳ್ಳಿ-ಸಿರಸಿ-ಸಾಗರ ಮಾರ್ಗದಿಂದ ಕೊಲ್ಲೂರಿಗೆ 40 ಕಿ.ಮೀ. ಸುತ್ತುಬಳಸುವ ಹರಸಾಹಸ ತಪ್ಪಿಸಿದಂತಾಗುತ್ತದೆ ಎಂಬುದು ಲೋಕೋಪಯೋಗಿ ಇಲಾಖೆಯ ಲೆಕ್ಕಾಚಾರ.ಸಂಪರ್ಕ ರಸ್ತೆ, ಸೇತುವೆ ಅಂತ ಸುಮಾರು ` 25 ಕೋಟಿಗಳ ಅನುದಾನ ಮಂಜೂರಾತಿಯಿಂದ ಪ್ರಯಾಣದ ಆಯಾಸ, ಅನಗತ್ಯ ಇಂಧನ, ಸಮಯ ಎಲ್ಲವೂ ಉಳಿಸಿದಂತಾಗುತ್ತದೆ. ಕೊನೆಗೂ ಸರ್ಕಾರ ಕಣ್ಣು ತೆರೆದು ಹಣ ಮಂಜೂರು ಮಾಡಿರುವುದು ಹೊಸನಗರ ತಾಲ್ಲೂಕಿನ ಪಾಲಿಗೆ ಈ ಬಜೆಟ್ ಖುಷಿ ತಂದಿದೆ.
ಬಳಕೆಯಾಗದ ಬಜೆಟ್ ಹಣ: ಈ 5 ವರ್ಷ ಹಿಂದಿನ ಬಜೆಟ್ನಲ್ಲಿ ಮಂಜೂರಾದ ` 28 ಲಕ್ಷ ವೆಚ್ಚದ ಪಟಗುಪ್ಪ ಸೇತುವೆಯ ಕಾಮಗಾರಿ ಶೇ. 10ರಷ್ಟು ಮಾತ್ರ ಆಗಿದೆ. ಕಳೆದ ವರ್ಷ ಚಕ್ರಾನಗರ ಕಾಲೊನಿಯಲ್ಲಿ ಅರಣ್ಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರಕ್ಕಾಗಿ ಮುಖ್ಯಮಂತ್ರಿ ಬಜೆಟ್ನಲ್ಲಿ ಪ್ರಸ್ತಾಪಿಸಿದ ` 5 ಕೋಟಿ ವೆಚ್ಚದ ಕಾಮಗಾರಿಗೆ ಕೇವಲ ` 1.80 ಮಂಜೂರಾಗುವ ಮೂಲಕ ಬಜೆಟ್ನಲ್ಲಿ ನಿಗದಿಪಡಿಸಿದ ಹಣ ಪೂರ್ಣ ಬಳಕೆಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.