ಲಿಂಗಸುಗೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಅಕ್ಷರ ದಾಸೋಹ ಸೇರಿದಂತೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಇನ್ನು ಮುಂದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಪರ ಕೆಲಸಗಳತ್ತ ಗಮನ ಹರಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಪರಮಾತ್ಮ, ಉಪಾಧ್ಯಕ್ಷ ಮಾನಪ್ಪ ಚವಾಣ್ ಹೇಳಿದರು.
ಶುಕ್ರವಾರ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿದ್ದ ಬಸಮ್ಮ ಸಭೆ ಆರಂಭದಲ್ಲಿಯೇ ಅಕ್ಷರದಾಸೋಹದ ಸಹಾಯಕ ನಿರ್ದೇಶಕರ ಕಾರ್ಯವೈಖರಿ, ಕಚೇರಿಯಲ್ಲಿ ನಿರಂತರ ಗೈರು ಹಾಜರಿ, ಅಡುಗೆದಾರರ ಅಲೆದಾಟ, ನಿಗದಿತ ಅವಧಿಯಲ್ಲಿ ವೇತನ ಪಾವತಿಸದಿರುವ ಆರೋಪಗಳ ಬಗ್ಗೆ ಗಮನ ಸೆಳೆದರು. ಅಧಿಕಾರಿ ನೆಪ ಹೇಳಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ಉದ್ಯೋಗ ಖಾತರಿ ಯೋಜನೆ ಅಡಿ ಜಲಾನಯನ, ಅರಣ್ಯ, ತೋಟಗಾರಿಕೆ ಮತ್ತಿತರ ಇಲಾಖೆಗಳಲ್ಲಿ ಕ್ರಿಯಾಯೋಜನೆ ಒಂದು, ಕೆಲಸ ಮತ್ತೊಂದು. ಕೆಲವೆಡೆ ಹಳೆ ಕಾಮಗಾರಿ ತೋರಿಸಿ ನಕಲಿ ಬಿಲ್ ಪಾವತಿ ಆಗಿರುವ ಬಗ್ಗೆ ಅಧ್ಯಕ್ಷರು ಸಭೆ ಗಮನ ಸೆಳೆದರು. ಅಂತಹ ಅವಘಡಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ಸಂಪರ್ಕಗಳು ಸಂಪೂರ್ಣ ಹಾಳಾಗಿವೆ. ಲೊಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರಬೇಕು. ತಾಲ್ಲೂಕು ಪಂಚಾಯಿತಿ ಕೂಡ ಗೊತ್ತುವಳಿ ಸ್ವೀಕರಿಸಲು ತಾಪಂ ಅಧಿಕಾರಿಗೆ ಸೂಚಿಸಿದರು. ಒಟ್ಟಾರೆ, ವಿವಿಧ ಇಲಾಖೆಗಳಲ್ಲಿ ಅರ್ಧಕ್ಕೆ ನಿಂತ ಹಾಗೂ ಮಾಡಬಹುದಾದ ಕಾಮಗಾರಿಗಳ ಕ್ರಿಯಾಯೋಜನೆಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸವ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.