ಕಾರ್ಕಳ: ‘ಆಗುಂಬೆ ಘಾಟಿಯ ವಿಚಾರವಾಗಿ ಸಂಸದರು ಹಾಗೂ ಮಾಜಿ ಶಾಸಕರು ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಕಳೆದ ಹತ್ತು ದಿನಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲ್ಲೂಕಿನ ನಾಲ್ಕು ರಸ್ತೆಗಳಿಗೆ ಅನುದಾನ ಬಿಡುಗಡೆಗೊಂಡಿದೆ. ಅದಕ್ಕೆ ಆಡಳಿತ ಮಂಜೂರಾತಿ ಕೂಡಾ ದೊರೆತಿದ್ದು, ಅದನ್ನು ಇದೀಗ ಮಾಜಿ ಶಾಸಕರು ತನ್ನ ಶಿಫಾರಸ್ಸಿನಿಂದ ಈ ಅನುದಾನ ಬಿಡುಗಡೆಗೊಂಡಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಲ್ಲಿ ಮಾಜಿ ಶಾಸಕರು ಮೂಗು ತೂರಿಸುವುದು ಸರಿಯಲ್ಲ’ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರು ಹಾಗೂ ಮಾಜಿ ಶಾಸಕರು ಹೇಳುವಂತೆ ತಾಲ್ಲೂಕಿನ ಅಭಿವೃದ್ಧಿ ಎಲ್ಲಾ ಕಡೆಯಿಂದ ಆಗಬೇಕು. ಅದಕ್ಕೆ ನನ್ನ ಸಹಮತವಿದೆ. ಅದರೆ ಮಾಜಿ ಶಾಸಕರ ಅವಧಿಯಲ್ಲಿ ಒಂದೇ ಒಂದು ರಸ್ತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅನುದಾನ ಬಿಡುಗಡೆಗೊಳ್ಳದಿರುವುದಕ್ಕೆ ಕಾರಣವೇನು? ಇದೀಗ ಬೇರೆ ಬೇರೆ ಕಾಮಗಾರಿಗೆ ಅನುಮೋದನೆ ಪಡೆದುಕೊಂಡು ಕಾರ್ಕಳಕ್ಕೆ ಹೊಸ ರೂಪ ಕೊಡುತ್ತೇನೆ ಎಂದು ಮಾಜಿ ಶಾಸಕರು ಹೇಳಿಕೊಳ್ಳುತ್ತಿರುವುದನ್ನೂ ನಾನು ಸ್ವಾಗತಿಸುತ್ತೇನೆ ಎಂದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವೈಯಕ್ತಿಕ ಶಭಾಸ್ಗಿರಿ ಬೇಡ. ಅಕ್ಟೋಬರ್ ಒಂದರೊಳಗೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಕ ಅವರೇನು ಕೆಲಸ ಕಾರ್ಯ ಮಾಡಲಿದ್ದಾರೆ ಎನ್ನುವ ಪಟ್ಟಿ ಬಿಡುಗಡೆಗೊಳಿಸಬೇಕು. ಆ ವೇಳೆ ಅವರ ಮಾರ್ಗದರ್ಶಕರು ಕೂಡಾ ಈ ಪಟ್ಟಿ ಬಿಡುಗಡೆಗೊಳಿಸುವಲ್ಲಿ ಭಾಗಿದಾರರಾಗಬೇಕು. ಅವರ ಪಟ್ಟಿಯನ್ನು ಬಿಟ್ಟು ಉಳಿದ ಕೆಲಸ ಕಾರ್ಯವನ್ನು ನಾನು ಕೈಗೆತ್ತಿಕೊಳ್ಳಲು ಸಿದ್ದನಿದ್ದೇನೆ. ಆ ವಿಚಾರದಲ್ಲಿ ಇನ್ನು ಮುಂದೆ ಅನಗತ್ಯ ಗೊಂದಲ ಬೇಡ ಅನಗತ್ಯ ಎಂದರು.
ಮಾಜಿ ಶಾಸಕರು ಪಟ್ಟಿ ಬಿಡುಗಡೆ ಮಾಡಲು ವಿಫಲರಾದರೆ, ಮುಂದೆ ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಯೋಜನೆಗಳಲ್ಲಿ ಅವರು ಹೇಳೀಕೆಗಳನ್ನು ಕೊಡುವುದು ಯೋಗ್ಯವಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ಸದಸ್ಯ ಪ್ರವೀಣ್ ಸಾಲ್ಯಾನ್, ಪುರಸಭೆ ಸದಸ್ಯ ಹಾಗೂ ಬಿಜೆಪಿ ನಗರಾಧ್ಯಕ್ಷ ಗಿರಿಧರ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾವ್, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ, ಪಕ್ಷದ ವಕ್ತಾರ ನರಸಿಂಹ ಕಾಮತ್ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.