ಸಿಂಧನೂರು: ನೂರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಆಯುರ್ವೇದ ಶಾಸ್ತ್ರದ ಕಡೆಗಣನೆಯಾಗುತ್ತಿದ್ದು ಸರ್ಕಾರ ಇದರ ಉತ್ತೇಜನಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರು ಕಂಡುಕೊಂಡಿದ್ದ ಈ ಆಯುರ್ವೇದ ಶಾಸ್ತ್ರ ನಮಗೆ ಬಳುವಳಿಯಾಗಿ ಬಂದಿದ್ದು,ಸರ್ಕಾರ ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಯುವಪೀಳಿಗೆಯಲ್ಲಿ ಕುಂದುತ್ತಿರುವ ಈ ಬಗೆಗಿನ ಆಸಕ್ತಿಗೆ ಮರುಜೀವ ನೀಡಿ ಪ್ರಚುರಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೈಯದ್ ಹಸನ್ಹುಸೇನ, ದೀರ್ಘಕಾಲದ ರೋಗಗಳಿಗೆ ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿರು.
ಡಾ.ಅನಿಲ್ ತಾಳಿಕೋಟೆ, ಡಾ. ರಮ್ಯದೀಪಿಕಾ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಆಯುರ್ವೇದ ಗಿಡಗಳನ್ನು ಬೆಳೆಸಿ ಮನೆ ಔಷಧಿಯಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾ.ಮಂಜುನಾಥ ಅಣಗೌಡರ್, ಡಾ. ವಿರುಪಾಕ್ಷಪ್ಪ, ಡಾ.ಎಸ್.ಎಸ್. ಸುಂಕದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ್, ಮಾತನಾಡಿದರು.
ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿವೃದ್ಧಿಸಂಘದ ಅಧ್ಯಕ್ಷ ಡಾ. ಮೌನೇಶ ಅಧ್ಯಕ್ಷತೆ ವಹಿಸಿದ್ದರು.
ಡಾ. ಪ್ರಶಾಂತ, ರಂಗನಾಥ, ರಾಮಣ್ಣ ಜಿ.ಎ. ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು. ಡಾ. ಬಸವರಾಜ ನಿರೂಪಿಸಿದರು. ಡಾ. ಭಾಗೀರಥಿ ವಂದಿಸಿದರು.