ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್ನ ಆಡಳಿತ ಮಂಡಳಿಯ ಪ್ರಮುಖ ಸದಸ್ಯರಾಗಿದ್ದ ಮತ್ತು ಭವಿಷ್ಯದಲ್ಲಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆ ಅಲಂಕರಿಸುವ ಸಾಧ್ಯತೆಗಳಿದ್ದ ವಿ. ಬಾಲಕೃಷ್ಣನ್ ಅವರು ಸಂಸ್ಥೆಯನ್ನು ತೊರೆಯುವ ನಿರ್ಧಾರ ಪ್ರಕಟಿಸಿರುವುದು ಸಂಸ್ಥೆಯ ಉನ್ನತ ಮಟ್ಟದಲ್ಲಿ ಎಲ್ಲವೂ ಸರಿ ಇಲ್ಲವೇ ಎನ್ನುವ ಶಂಕೆಗೆ ಆಸ್ಪದ ಮಾಡಿಕೊಟ್ಟಿದೆ. ಸಂಸ್ಥೆಯ ಷೇರು ಬೆಲೆ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಎನ್. ಆರ್. ನಾರಾಯಣಮೂರ್ತಿ ಅವರು ಈ ವರ್ಷದ ಜೂನ್ನಲ್ಲಿ ಸಂಸ್ಥೆಗೆ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮರಳಿದ ನಂತರ ಸಂಸ್ಥೆ ತೊರೆಯುವ ಉನ್ನತ ಅಧಿಕಾರಿಗಳ ಸಂಖ್ಯೆ ಹೆಚ್ಚಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆ ತೊರೆದ ಪ್ರಮುಖರಲ್ಲಿ ಇವರು ಎಂಟನೆಯವರು.
ಇವರು ಮೂರ್ತಿ ಅವರ ಅಚ್ಚುಮೆಚ್ಚಿನವರೂ ಆಗಿದ್ದರು ಎನ್ನುವುದೂ ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಆರು ತಿಂಗಳಲ್ಲಿನ 6ನೇ ಮತ್ತು 24 ಗಂಟೆಗಳಲ್ಲಿನ 2ನೆ ಪದತ್ಯಾಗ ಪ್ರಕರಣ ಇದಾಗಿದೆ. ಇನ್ಫೊಸಿಸ್ ಲ್ಯಾಬ್ಸ್ನ ಮುಖ್ಯಸ್ಥ ಸುಬ್ರಹ್ಮಣ್ಯಂ ಗೋಪರಾಜು ಅವರೂ ‘ಬಾಲಾ’ ಅವರಿಗಿಂತ ಒಂದು ದಿನ ಮುಂಚೆ ಸಂಸ್ಥೆ ತೊರೆದಿದ್ದರು.
‘ಬಾಲಾ’ ಎಂದೇ ಚಿರಪರಿಚಿತರಾಗಿರುವ ಬಾಲಕೃಷ್ಣನ್ ಅವರು ಸಂಸ್ಥೆಯ ಹೊರಗುತ್ತಿಗೆ, ಬ್ಯಾಂಕಿಂಗ್ ಸಾಫ್ಟ್ ವೇರ್ ಫಿನಾಕಲ್ ಮತ್ತು ಸಲಹಾ ಅಂಗಸಂಸ್ಥೆ ಲೋಡ್ ಸ್ಟೋನ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ನವೆಂಬರ್ನಲ್ಲಿಯೇ 9 ಲಕ್ಷದಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಇದು ಅವರು ಸಂಸ್ಥೆ ತೊರೆಯುವುದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು.
ಪರಿಣಾಮ
‘ಬಾಲಾ’, ಅವರ ಈ ನಿರ್ಧಾರವು ಸಂಸ್ಥೆಯ ಪಾಲಿಗೆ ದೊಡ್ಡ ಹೊಡೆತ ಎಂದೇ ಐ.ಟಿ ಉದ್ಯಮ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದ್ದರೂ, ಅವರ ನಿರ್ಗಮನವು ಸಾಫ್ಟ್ವೇರ್ ದೈತ್ಯ ಸಂಸ್ಥೆಯ ವಹಿವಾಟಿನ ಮೇಲೆ ಅಷ್ಟೇನೂ ಪರಿಣಾಮ ಬೀರದು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ.
2015ರಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆಯಿಂದ ನಿವೃತ್ತರಾಗಲಿರುವ ಎಸ್. ಡಿ. ಶಿಬುಲಾಲ್ ಅವರಿಂದ ತೆರವಾಗಲಿದ್ದ ಸ್ಥಾನ ಭರ್ತಿ ಮಾಡಲಿದ್ದ ‘ಬಾಲಾ’ ಅವರ ನಿರ್ಗಮನವು ಐ.ಟಿ ವಲಯದಲ್ಲಿ ಅಚ್ಚರಿ ಮೂಡಿಸಿರುವುದಂತೂ ನಿಜ.
ಸಂಸ್ಥೆಯ ಉನ್ನತ ಹುದ್ದೆಯಲ್ಲಿ ಇರುವ ಅನೇಕರು ‘ಸಿಇಒ’ ಆಗುವ ಆಕಾಂಕ್ಷೆ ಹೊಂದಿದ್ದಾರೆ. ನಾರಾಯಣ ಮೂರ್ತಿ ಅವರು ಸಂಸ್ಥೆಗೆ ಮರಳಿದ ನಂತರ ಅವರು ತಮಗೆ ಇರುವ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಇಂಗಿತವನ್ನು ಸಹಜವಾಗಿಯೇ ವ್ಯಕ್ತಪಡಿಸಿರುತ್ತಾರೆ. ಅದಕ್ಕೆ ತಕ್ಕಂತೆ ಆಡಳಿತ ಮಂಡಳಿಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ ಎನ್ನಲಾಗಿದೆ.
‘ಬಾಲಾ’ ಅವರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದ್ದ ಸಂದರ್ಭದಲ್ಲಿಯೇ ಅವರು ಸಂಸ್ಥೆ ತೊರೆಯುವ ನಿರ್ಧಾರಕ್ಕೆ ಬಂದಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸುತ್ತದೆ. 20 ವರ್ಷಗಳ ಅವಧಿಯಲ್ಲಿ ಮೂರು ತಲೆಮಾರಿನ ಮುಖಂಡರು ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಸಂಸ್ಥೆಯಲ್ಲಿ ಈಗಲೂ ಘಟಾನುಘಟಿಗಳಿಗೇನೂ ಕೊರತೆ ಇಲ್ಲ ಎಂದರೂ, ನಾರಾಯಣಮೂರ್ತಿ ಮತ್ತು ಹೊಸಬರ ನಡುವೆ ಅಂತರ ಹೆಚ್ಚಿದೆ.
ಸಂಸ್ಥೆ ತೊರೆದವರು
ಜಾಗತಿಕ ಮಾರಾಟ ಮುಖ್ಯಸ್ಥರಾಗಿದ್ದ ಬಸಬ್ ಪ್ರಧಾನ್, ಅಮೆರಿಕದಲ್ಲಿ ಬಿಎಫ್ಎಸ್ಐ ಮುಖ್ಯಸ್ಥ ಸುಧೀರ್ ಚತುರ್ವೇದಿ, ಉತ್ತರ ಅಮೆರಿಕ ವಹಿವಾಟು ಮುಖ್ಯಸ್ಥ ಅಶೋಕ್ ವೇಮುರಿ, ಲ್ಯಾಟಿನ್ ಅಮೆರಿಕದ ಹೊರಗುತ್ತಿಗೆ ಮುಖ್ಯಸ್ಥ ಎಚ್. ಆಂಡ್ರಡೆ, ಆಸ್ಟ್ರೇಲಿಯಾದ ಹೊರಗುತ್ತಿಗೆ ಮುಖ್ಯಸ್ಥ ಕಾರ್ತಿಕ್ ಜಯರಾಮನ್, ಉತ್ತರ ಅಮೆರಿಕದ ಸಂಪನ್ಮೂಲ ಮುಖ್ಯಸ್ಥ ಸ್ಟೀಫನ್ ಪ್ರಾಟ್ ಅವರು, ಇತ್ತೀಚೆಗೆ ಸಂಸ್ಥೆ ತೊರೆದ ಪ್ರಮುಖ ಅಧಿಕಾರಿಗಳಾಗಿದ್ದಾರೆ.
‘ಬಾಲಾ’ ಸ್ಪಷ್ಟನೆ
ನಾರಾಯಣಮೂರ್ತಿ ಅವರು ಸಂಸ್ಥೆಗೆ ಮರಳಿರುವುದಕ್ಕೂ ಅಥವಾ ಅವರ ಪುತ್ರ ರೋಹನ್ ಅವರಿಗೆ ಸಂಸ್ಥೆಯಲ್ಲಿ ಸಿಗುತ್ತಿರುವ ಮಹತ್ವಕ್ಕೂ ತಮ್ಮ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ. ನನಗೆ ಅತೃಪ್ತಿ ಏನೂ ಇಲ್ಲ. ಅವೆಲ್ಲ ಬರೀ ಗಾಳಿ ಸುದ್ದಿಗಳಾಗಿವೆ.
ಹೊಸ ಉದ್ದಿಮೆ ಸಂಸ್ಥೆ ಆರಂಭಿಸಲು ಸಂಸ್ಥೆ ತೊರೆದಿರುವುದಾಗಿ ಬಾಲಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ಇನ್ಫೊಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಮೋಹನ-ದಾಸ್ ಪೈ ಮತ್ತು ವಿಪ್ರೊದ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಪರಾಂಜಪೆ ಜತೆ ಸೇರಿಕೊಂಡು ಬಾಲಕೃಷ್ಣನ್ ಅವರು ₨ 100 ರಿಂದ ₨ 125 ಕೋಟಿ ಬಂಡವಾಳದ ಹೊಸ ಉದ್ದಿಮೆ ಆರಂಭಿಸುವ ಆಲೋಚನೆ ಇದೆ ಎನ್ನಲಾಗಿದೆ.
ಹೊಸ ನಿರ್ದೇಶಕರು..
‘ಬಾಲಾ’ ಅವರು ಸಂಸ್ಥೆ ತೊರೆಯುತ್ತಿದ್ದಂತೆಯೇ ಬಯೊಕಾನ್್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರನ್ನು ನಿರ್ದೇಶಕ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ಮತ್ತು ಹಿರಿಯ ಉಪಾಧ್ಯಕ್ಷ ಯುಬಿ ಪ್ರವೀಣ್ ರಾವ್ ಅವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.