ಬೆಂಗಳೂರು: ‘ನಾವು ಮುಸ್ಲಿಂ ವಿರೋಧಿಗಳಲ್ಲ. ಕಾಂಗ್ರೆಸ್ಸಿಗರೇ ನಿಜವಾದ ವಿರೋಧಿಗಳು. ಮುಸ್ಲಿಮರ ಕಲ್ಯಾಣಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಬದ್ಧವಾಗಿದ್ದೇವೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪ್ರತಿಪಾದಿಸಿದರು.
ನಗರದಲ್ಲಿ ಭಾನುವಾರ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗ ಆಯೋಜಿಸಿದ್ದ ಮುಸ್ಲಿಂ ಬುದ್ಧಿ ಜೀವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಏಕಾಂಗಿಯಾಗಿಯೇ ಜೆಡಿಎಸ್ ಚುನಾವಣೆಗಳನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಅನಿವಾರ್ಯ ಪರಿಸ್ಥಿತಿಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಬೇಕಾಯಿತು. ಮುಂದೆ ಅಂತಹ ಕೆಲಸ ಮಾಡುವುದಿಲ್ಲ. ಹಿಂದಿನ ಕಹಿ ಘಟನೆಗಳಿಂದ ಜೆಡಿಎಸ್ ಎಚ್ಚೆತ್ತುಕೊಂಡಿದೆ. ಜೆಡಿಎಸ್ ಬಗ್ಗೆ ತಪ್ಪು ಕಲ್ಪನೆ ಬೇಡ. ಅಲ್ಪಸಂಖ್ಯಾತ ಸಮುದಾಯವನ್ನು ಜೆಡಿಎಸ್ ನಿರ್ಲಕ್ಷಿಸುವುದಿಲ್ಲ. ಜೆಡಿಎಸ್ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಿದೆ. ಎಂದಿಗೂ ಮಾತಿಗೆ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಕಾಂಗ್ರೆಸ್ ಬಗ್ಗೆ ಅಲ್ಪಸಂಖ್ಯಾತರು ಎಚ್ಚರ ವಹಿಸಬೇಕು. ಕಾಂಗ್ರೆಸ್ಸಿಗರು ದ್ರೋಹ ಬಗೆಯುವುದರಲ್ಲಿ ನಿಸ್ಸೀಮರು. ಜಾತ್ಯತೀತ ಪಕ್ಷ ಎಂದು ಪ್ರತಿಪಾದಿಸಿಕೊಳ್ಳುವ ಹಕ್ಕು ಕಾಂಗ್ರೆಸ್ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಜಾತ್ಯತೀತ ತತ್ವ ಉಳಿಸಿಕೊಂಡಿರುವುದು ಜೆಡಿಎಸ್ ಮಾತ್ರ. ಬಿಜೆಪಿ ಜತೆ ಕೈಜೋಡಿಸಿದ ಕಾರಣವನ್ನಿಟ್ಟುಕೊಂಡು ಮುಸ್ಲಿಂ ಸಮುದಾಯ ಜೆಡಿಎಸ್ಗೆ ಶಿಕ್ಷೆ ನೀಡುವುದು ಬೇಡ. ಬಿಎಸ್ಪಿ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ಜತೆ ಕೈಜೋಡಿಸಿ ಅಧಿಕಾರ ಮಾಡಿವೆ. ಆದರೆ, ನಮ್ಮನ್ನು ಮಾತ್ರ ದೂರವಿಡಲಾಗುತ್ತಿದೆ. ಇನ್ನು ಎಷ್ಟು ದಿನ ಜೆಡಿಎಸ್ಗೆ ಈ ಶಿಕ್ಷೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ತಾನಾಗಿಯೇ ಬೆಂಬಲ ನೀಡಿತ್ತು ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಎಂದಿಗೂ ಸ್ವಂತ ಶಕ್ತಿ ಮೇಲೆ ಅಧಿಕಾರ ಮಾಡಿಲ್ಲ.
ಜೆಡಿಎಸ್ ದುಡಿಮೆಯ ಫಲ ಕಾಂಗ್ರೆಸ್ಗೆ ಲಭಿಸುತ್ತಿದೆ. ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ. ಜೆಡಿಎಸ್ನಲ್ಲಿ ಬೆಳೆದವರೇ ಅಲ್ಲಿ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ತ್ಯಜಿಸಲು ಕಾಂಗ್ರೆಸ್ಸಿಗರೇ ಕಾರಣ. ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ಸಹ ಕಾಂಗ್ರೆಸ್ಸಿಗರೆ. ಆದರೆ, ಜೆಡಿಎಸ್ನವರೇ ಇದಕ್ಕೆ ಕಾರಣ ಎಂದು ಅಪಪ್ರಚಾರ ಮಾಡಲಾಗಿದೆ ಎಂದು ದೂರಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸ್ವಾರ್ಥಕ್ಕೆ ಮುಸ್ಲಿಂ ಯುವಕರನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ. ಮುಸ್ಲಿಂ ಸಮುದಾಯ ಇನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಗತಿ ಸಾಧಿಸಿಲ್ಲ. ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ₨1024 ಕೋಟಿ ಅನುದಾನದಲ್ಲಿ ‘ಬಿದಾಯಿ’ ಯೋಜನೆಗೆ ಕೇವಲ ₨5 ಕೋಟಿ ನೀಡಲಾಗಿದೆ.
ಇದೊಂದು ಯೋಜನೆಯೇ? ಸರ್ಕಾರ ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ತಾತ್ಕಾಲಿಕ ಯೋಜನೆಗಳಿಂದ ಯಾವುದೇ ಸಮುದಾಯಕ್ಕೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ, ವಿಧಾನಪರಿಷತ್ ಮಾಜಿ ಸದಸ್ಯ ಏಜಾಸುದ್ದೀನ್, ಮುಖಂಡರಾದ ಜಫರುಲ್ಲಾ ಖಾನ್, ಸಯ್ಯದ್, ಮಾಹಿದ್ ಅಲ್ತಾಫ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.